Tuesday, December 20, 2011

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ




ಕಟೀಲು : ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವೀ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಹಯೋಗದಲ್ಲಿ ೧೪-೧೭ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮಂಗಳವಾರ ಕಟೀಲಿನಲ್ಲಿ ಆರಂಭವಾಯಿತು.
ಶಾಸಕ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಶಾಸಕ ಅಭಯಚಂದ್ರ ಕ್ರೀಡಾಳುಗಳಿಂದ ವಂದನೆ ಸ್ವೀಕರಿಸಿದರು. ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯಾ ಗಂಗಾಧರ್ ಧ್ವಜಾರೋಹಣಗೈದರು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಕರಾಟೆ ಸಮಿತಿಯ ಈಶ್ವರ್, ಉಪಪ್ರಾಚಾರ‍್ಯ ಸುರೇಶ್ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಎಸ್.ಅಂಗಡಿ, ಗ್ರಾಂಡ್ ಮಾಸ್ಟರ್ ಗೋಶಿಯನ್ ರ‍್ಯು ಸ್ಟೈಲ್ ಇಂಡಿಯನ್ ಕರಾಟೆಯ ಚೆನೈನ ಬಿ.ಎಂ.ನರಸಿಂಹನ್, ನವೀನ್ ಪುತ್ರನ್ ಮತ್ತಿತರರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

ಕರಾಟೆ ಹುಟ್ಟಿದ್ದು ಜಪಾನ್‌ನಲ್ಲಾ? ಭಾರತದಲ್ಲಾ?
ರಾಜ್ಯದ ೩೪ರಲ್ಲಿ ೧೮ಜಿಲ್ಲೆಗಳಿಂದ ಮಾತ್ರ ತಂಡಗಳು ಭಾಗವಹಿಸಿದ್ದು, ಕರಾಟೆ ಸರಕಾರಿ ಶಾಲೆಗಳಲ್ಲಿ ಇಲ್ಲ. ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಇದೆ. ಶಿಕ್ಷಣದ ಕ್ರೀಡಾ ವಿಭಾಗದಲ್ಲಿ ೨೧ ಆಟಗಳಿದ್ದು, ಕರಾಟೆ ಸೇರ್ಪಡೆಗೆ ವಿವಿಧ ರೀತಿಯ ಕರಾಟೆ ಕ್ರಮಗಳಿರುವುದು ತೊಡಕಾಗಿದೆ. ರಾಜ್ಯದಲ್ಲಿ ಸರಿಯಾದ ಕರಾಟೆ ಶಿಕ್ಷಕರಿಲ್ಲದ ಕಾರಣ, ತೀರ್ಪುಗಾಗಿ ದೂರದ ಚೆನ್ನೈನಿಂದ ಕರಾಟೆ ಶಿಕ್ಷಕರನ್ನು ಕರೆಯಿಸಲಾಗಿದೆ. ಇಲಾಖೆ ೨೦೦೫ರಿಂದ ಕರಾಟೆಯನ್ನು ವಿಶೇಷ ಆಟವೆಂದು ಮಾನ್ಯತೆ ಮಾಡಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ ಕ್ರೀಡೆಯಾಗಿದ್ದು ಇತ್ತೀಚಿಗೆಯಷ್ಟೇ ಹೆಚ್ಚು ಜನಪ್ರಿಯತೆ ಕಾಣುತ್ತಿದೆ ಎಂದು ಪ್ರಸ್ತಾವನೆಗೈದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಹೇಳಿದರು.
ಬಳಿಕ ಮಾತನಾಡಿದ ಶಾಸಕ ಗಣೇಶ ಕಾರ್ಣಿಕ್ ಹೇಳಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ್ದಲ್ಲ. ಅದರ ಮೂಲ ಭಾರತವೇ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮದೊಂದಿಗೆ ಕರಾಟೆ ಚೀನಾ, ಜಪಾನ್ ಮತ್ತಿತರ ದೇಶಗಳಿಗೆ ಪ್ರಚಾರ ಆಯಿತು ಎಂದು ಹೇಳಿದರು.

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ
ಆತಿಥೇಯ ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆ ಹಾಗೂ ದ.ಕ.ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ೧೪ರಿದ ೧೭ರ ವಯೋಮಿತಿಯವರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆ ಬಾಲಕರ ಮತ್ತು ಬಾಲಿಕೆಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು.
೧೪ರ ವಯೋಮಿತಿಯಲ್ಲಿ ಬಾಲಕರ ಬಾಲಿಕೆಯರ ವಿಭಾಗಗಳಲ್ಲಿ ದಕ್ಷಿಣ ಕನ್ನಡಕ್ಕೆ ತಂಡ ಪ್ರಶಸ್ತಿ ದೊರೆತರೆ, ೧೭ರ ವಯೋಮಿತಿಯಲ್ಲಿ ದ.ಕ.ದೊಂದಿಗೆ ಮೈಸೂರು ಜಿಲ್ಲೆ ತಂಡ ಪ್ರಶಸ್ತಿ ಹಂಚಿಕೊಂಡಿತು.
ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಈಶ್ವರ್, ಇಲಾಖೆಯ ಎನ್.ಎಸ್.ಅಂಗಡಿ, ಚೆನ್ನೈನ ನರಸಿಂಹನ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾಣ್, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಪ್ರಾಚಾರ‍್ಯ ಸುರೇಶ್ ಭಟ್, ಪುರುಷೋತ್ತಮ ಶೆಟ್ಟಿ, ಸಾಯಿನಾಥ ಶೆಟ್ಟಿ, ವೈ.ಮಾಲತಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.

No comments:

Post a Comment