Friday, December 9, 2011

ಚೇತನಾಶಕ್ತಿಯ ಜಾಗೃತಿಯಿಂದ ಕಾಯಿಲೆ ದೂರ-ಕಿರಣ್ ಕುಮಾರ್


ಕಟೀಲು : ನಮ್ಮ ದೇಹದ ಚೇತನಾಶಕ್ತಿಯನ್ನು ಅರಿತು ಅದನ್ನು ಜಾಗೃತಗೊಳಿಸುವುದರಿಂದ ಕಾಯಿಲೆಗಳು ದೂರವಾಗುತ್ತವೆ. ನಮ್ಮ ದೇಹವನ್ನು ವ್ಯಾಯಾಮ, ಯೋಗಗಳಿಂದ ಆರೋಗ್ಯವಂತವನ್ನಾಗಿಸಿಡಬಹುದು ಎಂದು ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಟಾನದ ಕಿರಣ್ ಕುಮಾರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳು ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಆಯೋಜಿಸಿದ ನ್ಯೂರೋಥೆರಪಿ ಚಿಕಿತ್ಸಾ ವಿಧಾನದ ಮಾಹಿತಿ ಹಾಗೂ ಚಿಕಿತ್ಸೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಇಂದಿನ ಅನಿಯಮಿತ ಜೀವನ ಶೈಲಿಯು ಶಾರೀರಿಕ ಶಕ್ತಿಯನ್ನು ಕಡಿಮೆ ಮಾಡಿದೆ. ಮಾನವ ಶರೀರವು ಸ್ವತಃ ಪುನರ್‌ನಿರ್ಮಾಣ ಮಾಡುವ ಮತ್ತು ನಿರೋಗಿಯಾಗಿರುವ ಸಾಮರ್ಥ್ಯ ಹೊಂದಿದೆ. ನ್ಯೂರೋಥೆರಪಿ ಚಿಕಿತ್ಸೆಯಲ್ಲಿ ಶರೀರದ ವಿಭಿನ್ನ ಅಂಗಗಳ ಮೇಲೆ ಒತ್ತಡವನ್ನು ಹಾಕುವುದರ ಮೂಲಕ ರೋಗಿಗೆ ಹೆಚ್ಚು ಲಾಭ ಸಿಗುವಂತಾಗುತ್ತದೆ. ನ್ಯೂರೋಥೆರಪಿಯು ಔಷಧಿ ರಹಿತವಾಗಿ ಚಿಕಿತ್ಸೆ ಮಾಡುತ್ತದೆ. ಶರೀರದ ಆಂತರಿಕ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಈ ಮೂಲಕ ಶರೀರದ ವಿಭಿನ್ನ ಅಂಗಗಳು ರೋಗದ ಬಗ್ಗೆ ಹೋರಾಡಲು ಸ್ವತಃ ಪ್ರತಿರೋಧ ಶಕ್ತಿಯನ್ನು ತಯಾರು ಮಾಡುತ್ತದೆ. ನ್ಯೂರೋಥೆರಪಿಯು ಕೇವಲ ರೋಗಲಕ್ಷಣಗಳ ಕಡೆಗೆ ಮಾತ್ರ ಗಮನ ಹರಿಸದೆ, ರೋಗದ ಮೂಲ ಕಾರಣವನ್ನೇ ದೂರ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಉಪಪ್ರಾಚಾರ್ಯ ಸುರೇಶ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್, ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ಎನ್‌ಎಸ್‌ಎಸ್‌ನ ಚಂದ್ರಕಲಾ, ಉಷಾ ಮತ್ತಿತರರಿದ್ದರು.

No comments:

Post a Comment