Sunday, May 26, 2013

ಯಕ್ಷಗಾನ ಕಲಾವಿದರಿಗೆ ಆರೋಗ್ಯ ತಪಾಸಣೆ


ಕಟೀಲು : ಇಲ್ಲಿನ ಯಕ್ಷಗಾನ ಮೇಳಗಳು ಹಾಗೂ ಕಟೀಲು ದೇಗುಲದ ಸಿಬಂದಿಗಳಿಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಶಿಬಿರ ಉದ್ಘಾಟಿಸಿದರು. ಶ್ರೀನಿವಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ವಾಸುದೇವ ಮಾತನಾಡಿ ತಮ್ಮ ಆಸ್ಪತ್ರೆಯಲ್ಲಿ ಇರುವ ಅನೇಕ ಸೌಲಭ್ಯಗಳನ್ನು ಅರ್ಹರು ಬಳಸಿಕೊಳ್ಳಬೇಕು. ಸಾಮಾಜಿಕವಾಗಿಯೂ ತಮ್ಮ ಆಸ್ಪತ್ರೆ ಜನರ ಬಳಿಗೆ ಹೋಗುತ್ತಿದೆ ಎಂದು ತಿಳಿಸಿದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ್ಯ ಸುರೇಶ್ ಭಟ್, ಶ್ರೀನಿವಾಸ ಸಂಸ್ಥೆಯ ಜನಾರ್ದನ ಮತ್ತಿತರರಿದ್ದರು.


ತಿರುಗಾಟ ಮುಗಿಸಿ, ಒಳಗಾದ ಕಟೀಲು ಮೇಳ



ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಐದೂ ಮೇಳಗಳ ಈ ವರುಷದ ತಿರುಗಾಟ ಮುಗಿಸಿ, ಒಳಗಾದವು. ಮುಂದಿನ ತಿರುಗಾಟ ನವೆಂಬರ್‌ನಲ್ಲಿ ಆರಂಭಗೊಳ್ಳಲಿದೆ.
ಚಿತ್ರ ಈಮೆಲ್

Friday, May 24, 2013

ಕಟೀಲಿನಲ್ಲಿ ಯಕ್ಷಗಾನ ಕಲಾವಿದರಿಗೆ ಆರೋಗ್ಯ ಶಿಬಿರ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲಿನ ಐದೂ ಯಕ್ಷಗಾನ ಮೇಳಗಳ ಕಲಾವಿದರು ಹಾಗೂ ಕಟೀಲು ದೇಗುಲದ ಸಿಬಂದಿಗಳು ಮತ್ತವರ ಕುಟುಂಬಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ತಾ.೨೬ರ ಭಾನುವಾರ ಸುರತ್ಕಲ್ ಮುಕ್ಕದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಕಾಲೇಜು ಸಂಶೋಧನೆ ಕೇಂದ್ರದ ವೈದ್ಯರಿಂದ ಆಯೋಜಿಸಲಾಗಿದೆ ಎಂದು ಕಟೀಲು ದೇಗುಲ, ಯಕ್ಷಗಾನ ಮಂಡಳಿ ಹಾಗೂ ಝೇಂಕಾರ ಬಳಗದ ಪ್ರಕಟನೆ ತಿಳಿಸಿದೆ.
ಯಕ್ಷಗಾನ ತಿರುಗಾಟ ಶನಿವಾರ ಕೊನೆಗೊಳ್ಳಲಿದ್ದು, ಮರುದಿನ ಆರೋಗ್ಯ ತಪಾಸಣೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ. ಉದ್ಘಾಟನೆ ಸಂದರ್ಭ ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಶ್ರೀನಿವಾಸ ಸಂಸ್ಥೆಯ ಎಂ.ಆರ್.ವಾಸುದೇವ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ.

ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ


ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ
ರಜಾಕಾಲದಲ್ಲಿ ಹಿಮ್ಮೇಳ ಕಾರ‍್ಯಾಗಾರ, ಕಲಾವಿದರು ಸಿಕ್ಕರೆ ಆರನೇ ಮೇಳ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಪತ್ತನಾಜೆಯ ಮರುದಿನ (ತಾ.೨೫) ಮುಗಿಯಲಿದೆ. ಮುಂದಿನ ತಿರುಗಾಟ ದೀಪಾವಳಿಯ ಅನಂತರ ಅಂದರೆ ನವೆಂಬರ್ ೭ರಂದೇ ಆರಂಭವಾಗಲಿದೆ. ಈವರೆಗೆ ದೇಗುಲದಲ್ಲಿ ದೀಪೋತ್ಸವದ ಬಳಿಕ ಮೇಳಗಳ ತಿರುಗಾಟ ಆರಂಭವಾಗುತ್ತಿದ್ದರೆ ಈ ಬಾರಿ ಸುಮಾರು ಇಪ್ಪತ್ತು ದಿನಗಳ ಮುಂಚಿತವಾಗಿಯೇ ತಿರುಗಾಟ ಆರಂಭವಾಗಲಿದ್ದು, ೧೧೦ ಆಟಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರಿಂದ ಹರಕೆಯಾಟ ಆಡಿಸುವ ಭಕ್ತರಿಗೆ ಪ್ರಯೋಜನವಾಗಲಿದೆ. ಮುಂದಿನ ಇಪ್ಪತ್ತೈದು ವರ್ಷಗಳವರೆಗೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಹರಕೆಯಾಟಗಳು ಕಟೀಲು ಮೇಳಗಳಿಗೆ ಬುಕ್ಕಿಂಗ್ ಆಗಿರುವುದು ದಾಖಲೆಯಾಗಿದೆ.
ಯಕ್ಷಗಾನ ಕಲಾವಿದರ ಕೊರತೆ ಇರುವುದರಿಂದ ಮುಂದಿನ ವರುಷಕ್ಕೆ ಆರನೆಯ ಮೇಳ ತಿರುಗಾಟ ಪ್ರಾರಂಭಿಸುವ ಯೋಚನೆಗೆ ಒಂದಿಷ್ಟು ಹಿನ್ನಡೆಯಾಗಿದ್ದರೂ ಹೆಚ್ಚುವರಿ ಕಲಾವಿದರ ಸೇರ್ಪಡೆಯಾದರೆ ಆರನೆಯ ಮೇಳ ಕಟೀಲಿನಿಂದ ಹೊರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಹಿಮ್ಮೇಳ ಕಾರ‍್ಯಾಗಾರ
ಎರಡು ವರುಷಗಳ ಹಿಂದೆ ಶ್ರೀ ದೇವೀ ಮಾಹಾತ್ಮ್ಯ ಕಾರ‍್ಯಾಗಾರ ನಡೆದಿದ್ದು, ಈ ಬಾರಿ ಕಟೀಲಿನಲ್ಲೇ ಜೂನ್ ೯ಮತ್ತು ೧೦ರಂದು ಹಿಮ್ಮೇಳ ಕಾರ‍್ಯಾಗಾರವನ್ನು ಆಯೋಜಿಸಲಾಗಿದೆ. ಈ ಮೂಲಕ ಕಟೀಲು ಮತ್ತು ತೆಂಕುತಿಟ್ಟಿನ ಇತರ ಮೇಳಗಳ ಹಿಮ್ಮೇಳವನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನ ನಡೆಯಲಿದೆ. ಈ ಕಾರ‍್ಯಾಗಾರಕ್ಕೆ ಕಟೀಲು ದೇಗುಲದೊಂದಿಗೆ ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗ ನೀಡಲಿದೆ.
ಕಟೀಲು ಮೇಳಗಳ ಕಲಾವಿದರಿಗೆ ಮಳೆಗಾಲದ ರಜಾ ಕಾಲದಲ್ಲೂ ಗೌರವ ಧನವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಕ್ಷಗಾನಾಸಕ್ತ ಉದ್ಯಮಿಗಳು ಸೇರಿ ಸಂಘಟಿಸುವ ಯಕ್ಷ ಧರ್ಮ ಬೋಧಿನೀ ಟ್ರಸ್ಟ್ ಐದು ಮೇಳಗಳಿಗೆ ನೀಡಿರುವ ಬಸ್ಸು ಹಾಗೂ ರಂಗಸ್ಥಳಗಳಿಂದ ಸಂಗ್ರಹಿತವಾಗುವ ಬಾಡಿಗೆ ಮೊತ್ತವನ್ನು ರಜಾಕಾಲದ ಗೌರವ ಧನ ನೀಡಲು ಬಳಸಲಾಗುತ್ತಿದ್ದು ಸುಮಾರು ಹದಿನೈದು ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತದೆ. ಮೇಳಗಳ ಎಲ್ಲ ಕಲಾವಿದರಿಗೂ ಆರೋಗ್ಯ ವಿಮೆಯನ್ನೂ ಮಾಡಲಾಗಿದೆ.