Saturday, December 27, 2014

ಕಟೀಲು ದೇವಳ ಶಿಕ್ಷಣ ಸಂಸ್ಥೆಗಳ ವಿದ್ಯಾ ಸಂಭ್ರಮ ಉದ್ಘಾಟನೆ

ಮತಬೇಧವಿಲ್ಲದ ದೇಗುಲದಲ್ಲಿ ಮಕ್ಕಳೆಂಬ ದೇವರ ನಿರ್ಮಾಣ- ಫಲಿಮಾರು ಸ್ವಾಮೀಜಿ
ಕಟೀಲು : ಕಟೀಲಿನಲ್ಲಿ ಎರಡು ದೇಗುಲಗಳು. ಒಂದು ಅರ್ಚಕರು ಆರಾಧಿಸುವ ಕಟೀಲು ದೇವಿಯ ದೇಗುಲ. ಮತ್ತೊಂದು ಮಕ್ಕಳೆಂಬ ದೇವರನ್ನು ನಿರ್ಮಿಸುವ ಮತಬೇಧವಿಲ್ಲದ ವಿದ್ಯಾ ದೇಗುಲ ಎಂದು ಕಟೀಲು ಶಾಲೆಯ ಹಳೆ ವಿದ್ಯಾರ್ಥಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಶಿಕ್ಷಣ ಸಂಸ್ಥೆಗಳ ವಿದ್ಯಾ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭ ವಿದ್ಯಾ ಸದನ ಸಭಾಭವನ, ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸವಿನೆನಪಿನ ಸುವರ್ಣ ಸೌಧದ ಕಛೇರಿ ಕೊಠಡಿ, ಕಂಪ್ಯೂಟರ್ ಕೇಂದ್ರಗಳ ಉದ್ಘಾಟನೆ ಹಾಗೂ ವಿಜ್ಞಾನ ವಿಭಾಗದ ಎರಡನೇ ಮಹಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಯುವ ಸಬಲೀಕರಣ ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಅಭಯಚಂದ್ರ ಜೈನ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಸಾಂಸದ ನಳಿನ್ ಕುಮಾರ್ ಉದ್ಘಾಟನೆಗಳನ್ನು ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಸಭಾಭವನಕ್ಕೆ ರೂ.೩ಲಕ್ಷ ಅನುದಾನ ನೀಡುವುದಾಗಿ ಹೇಳಿದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಜಿಲ್ಲಾ ಪಂ. ಸದಸ್ಯ ಈಶ್ವರ ಕಟೀಲು, ತಾ.ಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಬಜಪೆ ಸ್ವಯಂಭೂಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಎಲ್.ವಿ.ಅಮೀನ್ ಮುಂಬೈ, ಉದ್ಯಮಿಗಳಾದ ಬಿ. ಟಿ. ಬಂಗೇರ, ಕೃಷ್ಣ ಭಟ್ ತಿರುಪತಿ, ಸಂತೋಷ್ ಕುಮಾರ್ ಶೆಟ್ಟಿ, ಯದುನಾರಾಯಣ ಶೆಟ್ಟಿ, ಎಮ್. ಗಫೂರ್, ಕಟೀಲು ದೇವಳ ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗ್ಡೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸ್‌ಪಾಲ್ ಎಮ್. ಬಾಲಕೃಷ್ಣ ಶೆಟ್ಟಿ, ಕಟೀಲು ದೇವಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಾಸುದೇವ ಶೆಣೈ ಉಪಸ್ಥಿತರಿದ್ದರು.
ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಾಚಾರ‍್ಯ ಜಯರಾಮ ಪೂಂಜಾ ಸ್ವಾಗತಿಸಿದರು, ಕಟೀಲು ದೇವಳ ಪ್ರೌಢ ಶಾಲಾ ಉಪಪ್ರಾಚಾರ‍್ಯ ಕೆ.ವಿ.ಶೆಟ್ಟಿ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಶಿಕ್ಷಕರಾದ ಸಾಯಿನಾಥ ಶೆಟ್ಟಿ ಮತ್ತು ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.



ಇಂದು(ತಾ.೨೮) ಕಟೀಲು ಪ್ರೌಢಶಾಲೆಯ ಸುವರ್ಣ ಮಹೋತ್ಸವ ನಡೆಯಲಿದೆ.

Friday, December 26, 2014

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮವು ದಿನಾಂಕ 27-12-2014 ಶನಿವಾರದಿಂದ ದಿನಾಂಕ 2-1-2015 ರ ಶುಕ್ರವಾರದವರೆಗೆ ನಡೆಯಲಿದೆ.
ದಿನಾಂಕ ೨೭-೧೨-೨೦೧೪ ಶನಿವಾರ ಬೆಳಗ್ಗೆ ಶಾಲೆಯ ಹಳೆವಿದ್ಯಾರ್ಥಿ, ಶ್ರೀ ಫಲಿಮಾರು ಮಠ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ವಿದ್ಯಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಪ್ರೌಢಶಾಲೆಯ ಸುವರ್ಣಸೌಧದ ಕಛೇರಿ ಕೊಠಡಿಯನ್ನು ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಪದವೀಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಕಟ್ಟಡದ ೨ನೇ ಮಹಡಿ ನಿರ್ಮಾಣಕ್ಕೆ ಚಾಲನೆಯನ್ನು ಐವನ್ ಡಿ’ಸೋಜ ನೀಡಲಿದ್ದಾರೆ. 
ಸುವರ್ಣಸೌಧ ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ಸಾಂಸದ ನಳಿನ್‌ಕುಮಾರ್ ಕಟೀಲ್ ನೆರವೇರಿಸಲಿದ್ದು, ಶ್ರೀವಿದ್ಯಾ ಸದನ ಸಭಾಂಗಣವನ್ನು ಶ್ರೀ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ. 
ತಾ. ೨೮ರಂದು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಯು.ಟಿ.ಖಾದರ್, ಮೊಯ್ದಿನ್ ಬಾವಾ, ನಳಿನ್ ಕುಮಾರ್, ಡಾ.ಸುರೇಂದ್ರ ವಿ.ಶೆಟ್ಟಿ, ಡಾ.ಸುರೇಶ್ ರಾವ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ತಾ.೨೯ರಂದು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ತ್ರಿಂಶದುತ್ಸವ ನಡೆಯಲಿದ್ದು, ಅಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಹರಿಕೃಷ್ಣ ಪುನರೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ತಾ.೩೦ರಂದು ತ್ರಿಂಶದುತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಜೆ.ಆರ್.ಲೋಬೋ, ವಸಂತ ಬಂಗೇರ, ನಳಿನ್ ಕುಮಾರ್, ಅಮರನಾಥ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ತಾ. ೩೦ರಂದು ಹಿರಿಯ ಪ್ರಾಥಮಿಕ ಶಾಲೆಯ ೯೮ನೇ ವಾರ್ಷಿಕೋತ್ಸವದ ಸಂದರ್ಭ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಶಾರದಾ ಸದನದ ಉದ್ಘಾಟನೆ ಮಾಡಲಿದ್ದು, ಅಭಯಚಂದ್ರ ಜೈನ್, ನಳಿನ್ ಕುಮಾರ್, ಮಾಜಿ ಶಾಸಕ ವಿಜಯಕುಮಾರ ಶೆಟ್ಟಿ, ಎಕ್ಕಾರು ಮೋನಪ್ಪ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಜನವರಿ ೧ರಂದು ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ ನಡೆಯಲಿದ್ದು, ಈ ನೆನಪಿನ ಕಟ್ಟಡಕ್ಕೆ ನಿಟ್ಟೆ ವಿನಯ ಹೆಗ್ಡೆ ಶಿಲಾನ್ಯಾಸಗೈಯಲಿದ್ದಾರೆ. ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ನಳಿನ್ ಕುಮಾರ್, ಕೃಷ್ಣ ಜೆ.ಪಾಲೇಮಾರ್, ಮಂಗಳೂರು ವಿವಿ ಕುಲಸಚಿವರಾದ ಪಿ.ಎಸ್.ಎಡಪಡಿತ್ತಾಯ, ಎಂ.ಬಿ.ಪುರಾಣಿಕ್, ಅಜಿತ್‌ಕುಮಾರ ರೈ ಮಾಲಾಡಿ, ಪ್ರದೀಪಕುಮಾರ ಕಲ್ಕೂರ ಮುಂತಾದವರು ಭಾಗವಹಿಸಲಿದ್ದಾರೆ.
ತಾ. ೨ರಂದು ಕಟೀಲು ದೇಗುಲದ ಎಲ್ಲ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಳೆವಿದ್ಯಾರ್ಥಿಗಳನ್ನು ಸಚಿವ ವಿನಯಕುಮಾರ ಸೊರಕೆ ಅಭಿನಂದಿಸಲಿದ್ದು, ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲ ಶಿಕ್ಷಕರನ್ನು ಗೌರವಿಸಲಿದ್ದಾರೆ. ಅಭಯಚಂದ್ರ ಜೈನ್, ನಳಿನ್ ಕುಮಾರ್, ಡಾ.ಮೋಹನ ಆಳ್ವ, ಎ.ಸದಾನಂದ ಶೆಟ್ಟಿ, ಡಾ.ಗಣನಾಥ ಎಕ್ಕಾರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. 
ದಿನಂಪ್ರತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲವು ಪ್ರಾಥಮಿಕದಿಂದ ಸಂಸ್ಕೃತ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೆ ವಿದ್ಯಾಲಯಗಳನ್ನು ನಡೆಸುತ್ತಿದೆ.
ಸಂಸ್ಕೃತ ಸ್ನಾತಕೋತ್ತರ ಅಧ್ಯಯನಕ್ಕಾಗಿರುವ ಶ್ರೀ ದುರ್ಗಾ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ಮಂಗಳೂರು ವಿವಿಯ ಏಕೈಕ ಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ವ್ಯವಸ್ಥೆಯಿದೆ.
ಕಟೀಲು ಶಿಕ್ಷಣ ಸಂಸ್ಥೆಗಳಲ್ಲಿ ಈವರೆಗೆ ಸುಮಾರು ಐವತ್ತು ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದಿದ್ದು, ಪ್ರಸ್ತುತ ೨೫೦೦ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ. ಎಲ್ಲ ವಿದ್ಯಾಸಂಸ್ಥೆಗಳಲ್ಲಿ ದೇಣಿಗೆ ರಹಿತ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಪ್ರೌಢಶಾಲೆಗಳಲ್ಲಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡಿರುವ ದಾಖಲೆ ಕಟೀಲು ಪ್ರೌಢಶಾಲೆಯದ್ದು. 
ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಕಂಪ್ಯೂಟರ್ ಶಿಕ್ಷಣದಂತಹ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆ. ದೇಗುಲವು ಶಿಕ್ಷಣಕ್ಕಾಗಿ ಕಳೆದ ವರ್ಷ ರೂ.೨.೭೧ಕೋಟಿಗಳಷ್ಟನ್ನು ಖರ್ಚು ಮಾಡಿದೆ. ದೇಗುಲದ ವಿದ್ಯಾದಾನಕ್ಕೆ ದೇಣಿಗೆ ನೀಡಿದ್ದಲ್ಲಿ ಆದಾಯ ತೆರಿಗೆ ಕಾಯಿದೆಯ ೮೦ ಜಿ. ತೆರಿಗೆ ವಿನಾಯಿತಿ ಇದೆ.
ಕಟೀಲು ದೇಗುಲವು ಊಟ, ಆಟಗಳಂತೆ ಪಾಠಕ್ಕೆ ಪ್ರಸಿದ್ಧಿ ಹೊಂದಿದ್ದು, ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಖರ್ಚನ್ನು ಭರಿಸುತ್ತಿದೆ.

Sunday, December 14, 2014

ಯಕ್ಷಗಾನ ವಾಚಿಕ ಸಮಾರಾಧನೆ, ದೃಶ್ಯಾವಳೀ ಕೃತಿಗಳ ಬಿಡುಗಡೆ

ಕಟೀಲು : ಯಕ್ಷಗಾನ ಕಲಾವಿದರು ಅಧ್ಯಯನಾಸಕ್ತರಾಗಬೇಕಾದ ಅಗತ್ಯವಿದೆ ಎಂದು ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸರಸ್ವತಿ ಸದನದಲ್ಲಿ ಯಕ್ಷಗಾನ ಕಲಾವಿದ ಲೇಖಕ ರವಿಶಂಕರ್ ವಳಕ್ಕುಂಜ ರಚಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಕೃತಿಗಳ ಬಗ್ಗೆ ಮಾತನಾಡಿದರು.
ವಳಕ್ಕುಂಜರ ಯಕ್ಷಗಾನ ಪ್ರಸಂಗ ದ್ಯಶಾವಳೀ ಕೃತಿಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಯಕ್ಷಗಾನ ವಾಚಿಕ ಸಮಾರಾಧನೆ ಕೃತಿಯನ್ನು ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹಿರಣ್ಯ ವೇಕಟೇಶ್ ಭಟ್ಟ ಉಪಸ್ಥಿರಿದ್ದರು.
ಕೃತಿಕಾರ ರವಿಶಂಕರ ವಳಕ್ಕುಂಜ ಸ್ವಾಗತಿಸಿ, ವಾಸುದೇವರಂಗಾ ಭಟ್ ಹಾಗೂ ರಾಮಜೋಯಿಸ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

ಕಟೀಲು ಪದವಿ ಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿ


೨೫ನೇ ವರ್ಷದ ಸಂಭ್ರಮದಲ್ಲಿರುವ ಅಖಿಲ ಭಾರತ ತುಳು ಒಕ್ಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ಅಡ್ಯಾರ್ ಸಾಹಿತ್ಯ ಕಾಲೇಜಿನಲ್ಲಿ ನಡೆದ ವಿಶ್ವ ತುಳುವೆರ ಪರ್ಬ ೨೦೧೪ ಇದರ ಅಂಗವಾಗಿ
ಅಂತರ ಕಾಲೇಜು ಕಲಾ ಪಂಥ ಸಹ್ಯಾದ್ರಿ ತುಳುವೆರ ಐಸಿರಿ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಮಗ್ರ ತಂಡ ಪ್ರಶಸ್ತಿ, ಉತ್ತಮ ಕಾರ್ಯಕ್ರಮ ನಿರೂಪಣೆ ಹಾಗೂ ಶಿಸ್ತು ಬದ್ಧ ತಂಡ ಪ್ರಶಸ್ತಿ ಪಡೆದುಕೊಂಡಿದೆ.