Friday, September 17, 2010

ಕಟೀಲಿನ ನಂದಿನೀ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಬಾರದೇಕೆ?

ನದೀ ಮಧ್ಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉಪಯೋಗಕ್ಕೆ ಸುತ್ತಲೂ ಹರಿಯುವ ನಂದಿನೀ ನದಿಯಿಂದಲೇ ವಿದ್ಯುತ್ ಉತ್ಪಾದನೆ ಮಾಡಬಾರದೇಕೆ?
ಇಂತಹದ್ದೊಂದು ಪ್ರಶ್ನೆಯನ್ನಿಟ್ಟುಕೊಂಡರೆ; ನಿರಂತರ ಹತ್ತು ತಿಂಗಳಲ್ಲಿ 25ಕಿಲೋವ್ಯಾಟ್ ವಿದ್ಯುತ್ ಪಡೆಯುವುದು ಕಷ್ಟವೇ ಅಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಈಗಾಗಲೇ 277ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿರುವ ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್.
ಕಟೀಲು ದೇಗುಲದಲ್ಲಿ ೭೦ಕಿಲೋವ್ಯಾಟ್‌ನ 3 ಜನರೇಟರ್‌ಗಳು ಇವೆ. ಇಷ್ಟು ಸಾಕಾಗುವುದಿಲ್ಲವೆಂದು ನೂರು ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯದ ಜನರೇಟರ್ ಪರಿಶೀಲನೆಯಲ್ಲಿದೆ. ನಾಲ್ಕು ವಿದ್ಯಾ ಸಂಸ್ಥೆಗಳಲ್ಲಿ 25ಕಿಲೋ ವ್ಯಾಟ್ ವಿದ್ಯುತ್ ಖರ್ಚಾಗುತ್ತದೆ. ಮಾಸ್ಟರ್ ಪ್ಲಾನ್ ಬಳಿಕ ನೂರು ಕೋಣೆಗಳ ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳಾದರೆ ಇನ್ನಷ್ಟು ವಿದ್ಯುತ್ ಬೇಕಾಗುತ್ತದೆ. ಅಂದರೆ 100 ಕಿಲೋವ್ಯಾಟ್ ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ. ಈಗಾಗಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಹಣವನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದೆ.
ಇಂತಹ ಹಿನ್ನಲೆಗಳಿರುವಾಗ ವೇಗದಿಂದ ಹರಿಯುವ ನಂದಿನೀ ನದಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಕೈಗೊಂಡರೆ ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ ಕಿನ್ನಿಗೋಳಿಯ ತಮ್ಮ ಮನೆಯ ತೋಟದಲ್ಲಿ ಹರಿಯುವ ತೋಡಿನ ನೀರಿಗೆ ಟರ್ಬ್‌ನೈರ್ ಇಟ್ಟು ೨ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿರುವ ಜಿ.ಪಂ.ಸದಸ್ಯ ಪ್ರಮೋದ್ ಕುಮಾರ್.
ಕಟೀಲಿನಲ್ಲಿ ದೇಗುಲದ ಎದುರು ಕಟ್ಟಲಾಗಿರುವ ಕಿಂಡಿ ಅಣೆಕಟ್ಟನ್ನು ಮತ್ತು ಅದರಲ್ಲಿ ಹರಿಯುತ್ತಿರುವ ನೀರಿನ ವೇಗವನ್ನು ಶುಕ್ರವಾರ ಗಮನಿಸಿರುವ ರತ್ನಾಕರ್ ಪ್ರಕಾರ ಟರ್ಬನೈರ್ ಮೂಲಕ 25ರಿಂದ 50ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಸುಮಾರು ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪು ಮೂಲಕ ವೇಗವಾಗಿ ಹರಿಸಿದರೆ 4 ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ 3-4 ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತನ್ನು ಆರು ತಿಂಗಳ ಕಾಲ ನಿರಂತರ ಆರಾಮವಾಗಿ ಪಡೆಯಬಹುದು.
ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರಲ್ಲಿ ಅಭಿಪ್ರಾಯ ಕೇಳಿದಾಗ, ಭಕ್ತರಿಂದಲೂ ಈ ಬಗ್ಗೆ ಸಲಹೆಗಳು ಬಂದಿವೆ. ದೇಗುಲದ ಆಡಳಿತಾಧಿಕಾರಿಯವರಲ್ಲಿ ನದಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಬಗ್ಗೆ ನಿವೇದನೆ ಮಾಡಿಕೊಡಲಾಗುವುದು. ಇದರಿಂದ ದೇಗುಲಕ್ಕೂ ಲಾಭವಿದೆ. ನೀರಿನ ಸದುಪಯೋಗವೂ ಆಗುತ್ತದೆ ಎಂದು ಹೇಳಿದರು.

2 comments:

  1. ತುಂಬ ಚೆನ್ನಾಗಿದೆ. ನಂದಿನಿ ನದಿಯಲಿ ನೀರು ಮಳೆಗಾಲದಲ್ಲಿ ಧಾರಾಕಾರವಾಗಿ ಹರಿಯುತ್ತಿರುತ್ತದೆ. ಅದರ ಉಪಯೋಗವನ್ನು ಕಂಡಿತ ಪಡೆದುಕೊಳ್ಳಬಹುದು. ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿ ಬರುತ್ತಿದೆ. ಧನ್ಯವಾದಗಳು.

    ReplyDelete
  2. ಕಟೀಲಿನಲ್ಲಿ ತುಂಬಾ ಅಭಿವೃಧ್ಧಿ ಕಾರ್ಯ ಆಗಬೇಕಿದೆ. ಬಸ್ ನಿಲ್ದಾಣ ತುಂಬಾ ಕೊಳಾಕಾಗಿದೆ. ಶೌಚಾಲಯ ವ್ಯವಸ್ಥೆ ಏನು ಚೆನ್ನಾಗಿಲ್ಲ. ಕಟೀಲಿನಲ್ಲಿ ಆದಾಚಾರಿಗಳಿಗೆ ನಡೆದಾಡಲು ಸರಿಯಾದ ವ್ಯವಸ್ಥೆ ಇಲ್ಲ. ನಿಮ್ಮ ಬ್ಲಾಗ್ ಈ ಸಮಸ್ಯೆಗಳಿಗೆ ಸಹಾಯವಾದರೆ ಉತ್ತಮ.

    I am very happy with your articles. your Blog is my home page :)

    ReplyDelete