Tuesday, June 15, 2010
ಕಟೀಲಿನಲ್ಲಿ ಅನ್ನಪ್ರಾಶನ ಸೇವೆ
ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕಳೆದ ವರ್ಷದ ಎಪ್ರಿಲ್ನಿಂದ ಈ ವರ್ಷದ ಮಾರ್ಚ್ತನಕದ ಒಂದು ವರುಷದ ಅವಧಿಯಲ್ಲಿ ೫೧೭೫ ಮಕ್ಕಳಿಗೆ ಅನ್ನಪ್ರಾಶನ ಸೇವೆ ನಡೆದಿದ್ದು, ೨೦೧೦ರ ಎಪ್ರಿಲ್ನಲ್ಲಿ ೪೨೪, ಮೇನಲ್ಲಿ ೫೫೭ ಮಕ್ಕಳಿಗೆ ಅನ್ನಪ್ರಾಶನವನ್ನು ಮಾಡಲಾಗಿದೆ. ಕಳೆದ ಅಕ್ಟೋಬರ್ನಲ್ಲಿ ೫೮೨ ಮಕ್ಕಳಿಗೆ ಅನ್ನಪ್ರಾಶನ ಸಂಸ್ಕಾರ ಮಾಡಿರುವುದು ದಾಖಲೆಯ ಸಂಖ್ಯೆಯಾಗಿದೆ.ಶ್ರೀ ದೇವೀ ಸನ್ನಿಧಿಯಲ್ಲಿ ಮೊದಲ ಬಾರಿಗೆ ಮಗುವಿಗೆ ಅನ್ನಪ್ರಾಶನ ಮಾಡುವುದಾಗಿ ಅನೇಕ ಹೆತ್ತವರು ಹರಕೆ ಹೊತ್ತಿರುತ್ತಾರೆ. ಅಥವಾ ದೇವೀ ಸನ್ನಿಧಿಯಲ್ಲೇ ಅನ್ನಪ್ರಾಶನ ಮಾಡಿಸುವುದು ಒಂದು ಸಂಪ್ರದಾಯವೂ ಆಗಿದೆ. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆಯಾದ ಬಳಿಕ ದೇವರಿಗೆ ಸಮರ್ಪಿತವಾದ ಹಾಲುಪಾಯಸ, ಬೆಲ್ಲತೆಂಗಿನಕಾಯಿ ಹಾಕಿ ಮಾಡಿದ ಗುಡಾನ್ನ ಅಂದರೆ ಗಟ್ಟಿಪಾಯಸವನ್ನು ಅರ್ಚಕರು ಮಂತ್ರ ಹೇಳುತ್ತಿದ್ದಂತೆ ತಾಯಂದಿರು ತಮ್ಮ ಮಕ್ಕಳಿಗೆ ಉಣಿಸುವ ಮೂಲಕ ಅನ್ನಪ್ರಾಶನದ ಸಂಸ್ಕಾರವನ್ನು ಮಾಡಲಾಗುತ್ತದೆ. ನಾನಾ ದೇಗುಲಗಳಲ್ಲಿ ಈ ಸಂಪ್ರದಾಯವಿದ್ದು, ಮನೆಗಳಲ್ಲೂ ಈ ಸಂಸ್ಕಾರವಿದೆ. ಆದರೆ ಕಟೀಲು ದೇವೀ ಸನ್ನಿಧಿಯಲ್ಲಿ ತಮ್ಮ ಮಕ್ಕಳಿಗೆ ಮೊದಲ ಬಾರಿಗೆ ಅನ್ನ ಉಣಿಸುವ ಸಂಸ್ಕಾರವನ್ನು ಮಾಡುವುದು ವಿಶೇಷ ಎಂಬುದು ಭಕ್ತರ ಅನಿಸಿಕೆ. ಕಟೀಲು ದೇಗುಲದಲ್ಲಿ ಅನ್ನಪ್ರಾಶನ ಸೇವೆಗೆ ಕಾಣಿಕೆ ರೂ. ೨೫.
Subscribe to:
Post Comments (Atom)
No comments:
Post a Comment