Monday, June 24, 2013

......ಕೇರೆ ಹಾವಿನ ಬಾಲವನ್ನು ಜಡೆಗೆ ತಾಗಿಸಿದರೆ ಉದ್ಧವಾಗುತ್ತಾ?!


 
 
ಕಟೀಲು : ಹಾವಿಗೆ ಕಿವಿ ಕೇಳಿಸುತ್ತಾ?, ಹಾವು ದ್ವೇಷ ಸಾಧಿಸುತ್ತಾ?, ವಿಸಿಲ್ ಊದಿದರೆ ಹಾವು ಬರುತ್ತದಾ! ಕೇರೆ ಹಾವಿನ ಬಾಲವನ್ನು ಹುಡುಗಿಯರು ತಮ್ಮ ಜಡೆಗೆ ತಾಗಿಸಿದರೆ ಕೂದಲು ಉದ್ಧವಾಗುತ್ತಂತೆ ಹೌದಾ? ಕೇರೆ ಹಾವು ಬಾಲದಲ್ಲಿ ಬಡಿಯುತ್ತದೆಯಂತೆ ನಿಜವಾ? ಹಸಿರು ಹಾವು ತಲೆಗೆ ಕುಟುಕಿದರೆ ಸಾಯುತ್ತೇವಾ? ಹೆಬ್ಬಾವು ಮಕ್ಕಳನ್ನು ನುಂಗುತ್ತಾ...ಹೀಗೆ ಹಾವುಗಳ ಕುರಿತಾದ ಹತ್ತಾರು ಪ್ರಶ್ನೆಗಳನ್ನೆದುರಿಸಿದವರು ಖ್ಯಾತ ಹಾವು ರಕ್ಷಕ ಉಡುಪಿಯ ಗುರುರಾಜ ಸನಿಲ್.
ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಸುವರ್ಣ ಮಹೋತ್ಸವದ ವರ್ಷಾಚರಣೆ ಸಲುವಾಗಿ ಆಯೋಜಿಸಲಾದ ಹಾವು-ನಾವು ಪರಿಸರ ಜಾಗೃತಿ, ಪ್ರಾತ್ಯಕ್ಷಿಕೆ ಕಾರ‍್ಯಕ್ರಮ.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೀಡಿಯೋ ಮೂಲಕ ಐವತ್ತಕ್ಕೂ ಹೆಚ್ಚು ಹಾವುಗಳ ಬಗ್ಗೆ ಮಾಹಿತಿ ನೀಡಿದ ಗುರುರಾಜ ಸನಿಲ್ ಹಾವಿಗೆ ಕಿವಿಯಿಲ್ಲ, ಭಾರತದಲ್ಲಿ ಹೆಬ್ಬಾವು ಮಕ್ಕಳನ್ನು ತಿಂದಿರುವುದಕ್ಕೆ ದಾಖಲೆಯಿಲ್ಲ. ಕೇರೆ ಹಾವು ಹೊಡೆದದ್ದನ್ನು ನೋಡಿದವರಿಲ್ಲ ಹೀಗೆ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತ, ಕೇರೆ, ಹೆಬ್ಬಾವು, ಇರ್ತಲೆ ಹಾವುಗಳನ್ನು ಮಕ್ಕಳ ಕೈಗೇ ಕೊಟ್ಟು ಅವುಗಳಿಗೆ ಉಪಟಳ ಮಾಡದಿದ್ರೆ ಅವೇನೂ ಮಾಡುವುದಿಲ್ಲ. ನಾಯಿ, ಬೆಕ್ಕುಗಳನ್ನು ಪ್ರೀತಿಸಿದಂತೆ ಹಾವುಗಳನ್ನೂ ನಾವು ಪ್ರೀತಿಸಬಹುದು. ವಿಷಪೂರಿತ ಹಾವುಗಳೆಂದು ತಪ್ಪು ನಂಬಿಕೆಯಿಂದ ವಿಷ ರಹಿತ ಹಾವುಗಳನ್ನೂ ಕೊಲ್ಲುತ್ತಿದ್ದೇವೆ. ಅವುಗಳ ಬಗ್ಗೆ ಅರಿವು ಅಗತ್ಯ ಎಂದು ಹೇಳಿದ ಸನಿಲ್ ಹಾವು ಕಡಿತವಾದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿರು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Tuesday, June 11, 2013

ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ ಅಧ್ಯಯನ ಕಮ್ಮಟ

ಕಟೀಲು : ಆಧುನಿಕತೆ ಜೊತೆಗೆ ಪರಂಪರೆಯ ಉಳಿಸುವಿಕೆ ಎಲ್ಲ ಕಲಾಪ್ರಾಕಾರಗಳಂತೆ ಯಕ್ಷಗಾನಕ್ಕೂ ಅತ್ಯಗತ್ಯವಿದೆ ಎಂದು ಸಚಿವ ಅಭಯಚಂದ್ರ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ಎರಡು ದಿನಗಳ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದುರ್ಗಾಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನ ಸಚ್ಚಿದಾನಂದ ಶೆಟ್ಟಿ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಕಟೀಲು ಮೇಳಗಳ ದೇವೀಪ್ರಸಾದ ಶೆಟ್ಟಿ ಮುಂತಾದವರಿದ್ದರು. ಸದಸ್ಯ ಸಂಚಾಲಕ ಪದ್ಮನಾಭ ಗೌಡ ಸ್ವಾಗತಿಸಿದರು. ಅಶೋಕ್ ಭಟ್ ಉಜಿರೆ ಕಾರ‍್ಯಕ್ರಮ ನಿರೂಪಿಸಿದರು.
 ನೂರಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿದ ಈ ಕಮ್ಮಟಕ್ಕೆ ಕಟೀಲು ದೇವಸ್ಥಾನ, ದುರ್ಗಾ ಮಕ್ಕಳ ಮೇಳ, ಹಾಗೂ ಕಟೀಲು ಯಕ್ಷಗಾನ ಮೇಳಗಳು ಸಹಕಾರ ನೀಡಿವೆ.

ಸಮಾರೋಪ
ಮದ್ದಲೆಯಲ್ಲಿ ಇಪ್ಪತ್ತೈದು ಸ್ವರಗಳಿವೆ ಅಂತ ರಾಘವ ನಂಬಿಯಾರ್ ಹೇಳಿದಾಗ ಖ್ಯಾತ ಮದ್ದಲೆ ವಾದಕ ೨೮ಸ್ವರಗಳನ್ನು ಬಾರಿಸಿ ತೋರಿಸಿದರು. 
ಬಲಿಪ ನಾರಾಯಣ ಭಾಗವತರು ಸುಧನ್ವಾರ್ಜುನದ ಒಂದೇ ಪದ್ಯವನ್ನು ಎಲ್ಲ ತಾಳಗಳಲ್ಲೂ ಹಾಡಿ ತೋರಿಸಿದರು.
ಆದಿತಾಳಕ್ಕೆ ಬಿಡ್ತಿಗೆಯಿಲ್ಲ ಎಂಬುದು ಬಹು ಚರ್ಚೆಯಾಗಿ ನಿರ್ಣಯವಾಗದೆ ಕೊನೆಗೆ ತಾಳಗಳಿಗೇ ಬೇರೆ ಗೋಷ್ಟಿ ಮಾಡುವುದು ಎಂದಾಯಿತು. 
ಗೋವಿಂದ ಭಟ್ ಮತ್ತು ಕೋಳ್ಯೂರು ರಾಮಚಂದ್ರ ರಾವ್ ಬಹು ಹುರುಪಿನಿಂದ ಅತಿಕಾಯ ಲಕ್ಷ್ಮಣನ ಯುದ್ಧ, ಧಕ್ಷಾಧ್ವರ ಕೆಲ ಭಾಗಗಳನ್ನು ಪ್ರಾತ್ಯಕ್ಷಿಕೆಗೆ ಕುಣಿದು ತೋರಿಸಿದರು.
ಪಂಚವಟಿಯ ರಾಘವ ನರಪತೆಯನ್ನು ಬಲಿಪ, ತೆಂಕಬೈಲು, ಪುಂಡಿಕಾಯಿ, ಬಲಿಪ ಶಿವಶಂಕರ, ಲೀಲಾವತಿ ಬೈಪಾಡಿತ್ತಾಯ, ಕುಬಣೂರು ಹೀಗೆ ಆರು ಬೇರೆ ಬೇರೆ ಶೈಲಿಗಳಲ್ಲಿ ಹಾಡಿ ತೋರಿಸಿದ್ದಕ್ಕೆ ಎಂಭತ್ತರ ಗೋವಿಂದ ಭಟ್, ಕೋಳ್ಯೂರು, ದಿವಾಣ ಶಿವಶಂಕರ ಭಟ್ ಅಭಿನಯಿಸಿದರು.
ಇದೆಲ್ಲ ನಡೆದದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಎರಡನೆಯ ದಿನವಾದ ಸೋಮವಾರ.
ಕಟೀಲು ಮೇಳಗಳ ಕಲಾವಿದರೂ ಸೇರಿದಂತೆ ಹಿಮ್ಮೇಳ ಕಲಾವಿದರ ಭಾಗವಹಿಸುವಿಕೆ ಕಡಿಮೆ ಪ್ರಮಾಣದಲ್ಲಿದ್ದರೂ, ಭಾಗವಹಿಸಿದ ಹಿರಿಯ ವಿದ್ವಾಂಸರ, ಕಲಾವಿದರ ಅಭಿಪ್ರಾಯದಂತೆ ಎರಡು ದಿನಗಳಲ್ಲಿ ಇದಕ್ಕಿಂತ ಚಂದವಾಗಿ ಗೋಷ್ಟಿಯನ್ನು ಮಾಡಲಾಗದು ಎಂಬಷ್ಟು ಪರಿಣಾಮಕಾರಿಯಾಗಿ ಗೋಷ್ಟಿ ಮೂಡಿ ಬಂದಿದೆ.
ಅಧ್ಯಯನ, ತರಬೇತಿಗಳ ಮೂಲಕ ಯಕ್ಷಗಾನ ಕಲಾವಿದರನ್ನು ಬೆಳೆಸಿ, ಯಕ್ಷಗಾನ ಕಲೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಬೇಕೆಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು..
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಮಾಯಣ, ಮಹಾಭಾರತಗಳನ್ನು ಜನರಿಗೆ ಸುಲಭವಾಗಿ ತಿಳುಸವ ಮಾಧ್ಯಮವಾದ ಯಕ್ಷಗಾನ ಮತ್ತದರ ಕಲಾವಿದರು ಅಭಿನಂದನೀಯರು ಎಂದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು. ರಾಘವೇಂದ್ರ ನಂಬಿಯಾರ್ ಕಮ್ಮಟದ ಬಗ್ಗೆ ಮಾತನಾಡಿದರು. ಯು.ದುಗ್ಗಪ್ಪ ಸ್ವಾಗತಿಸಿದರು. ಪದ್ಮನಾಭ ಗೌಡ ಬಿಲಿನೆಲೆ ಕಾರ‍್ಯಕ್ರಮ ನಿರೂಪಿಸಿದರು.

ಪುಸ್ತಕ ವಿತರಣೆ



ಕಟೀಲು ಪ್ರಾಥಮಿಕ ಶಾಲಾ ಮಕ್ಕಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸದಸ್ಯರಾದ ರೋಸಿ ಪಿಂಟೋ, ರಾಮಗೋಪಾಲ್, ಹರಿಶ್ಚಂದ್ರ ರಾವ್ ಮುಖ್ಯ ಶಿಕ್ಷಕಿ ಮಾಲತಿ, ಮತ್ತಿತರರಿದ್ದರು.

ಪುಸ್ತಕ ವಿತರಣೆ
ಕಟೀಲು ಪ್ರಾಥಮಿಕ ಶಾಲಾ ಮಕ್ಕಳಿಗೆ ರಾಘವ ಚೌಟ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು.

ನಂದಿನಿ ಯುವಕ ಮಂಡಲದಿಂದ ಪುಸ್ತಕ ವಿತರಣೆ ನಡೆಯಿತು. ಜಿ.ಪಂ.ಸದಸ್ಯ ಈಶ್ವರ ಕಟೀಲ್, ಗ್ರಾ.ಪಂ.ಸದಸ್ಯ ಅರುಣ್ ಶೆಟ್ಟಿ, ದೇವೀಪ್ರಸಾದ ಶೆಟ್ಟಿ ಮತ್ತಿತರರಿದ್ದರು.

Saturday, June 8, 2013

ಕಟೀಲು ಪ್ರೌಢಶಾಲೆ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ





ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ ಶನಿವಾರ ಸರಸ್ವತೀ ಸದನದಲ್ಲಿ ನಡೆಯಿತು.
ಮಧುರೈ ಹೈಟೆಕ್ ಅರೈ ಲಿ.ನ ಆಡಳಿತ ನಿರ್ದೇಶಕ ಬಿ.ಟಿ.ಬಂಗೇರ ಉದ್ಘಾಟಿಸಿ, ಭ್ರಷ್ಟಾಚಾರ ಇಲ್ಲವಾಗಿಸಲು ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.
ಸಂಗೀತ, ನೃತ್ಯ, ಯೋಗ ತರಗತಿಗಳನ್ನು ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಧುಕರ ಅಮೀನ್, ಸುವರ್ಣ ಮಹೋತ್ಸವದ ಸಲುವಾಗಿ ವರ್ಷವಿಡೀ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ.ಸದಸ್ಯ ಈಶ್ವರ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಕೆ.ವಿ.ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಸಾಯಿನಾಥ ಶೆಟ್ಟಿ ವಂದಿಸಿದರು. ಬಳಿಕ ಅರುಣಾ ಉಡುಪ ಬಳಗದಿಂದ ವೈವಿಧ್ಯಮಯ ಕಾರ‍್ಯಕ್ರಮಗಳು ನಡೆದವು.

Sunday, May 26, 2013

ಯಕ್ಷಗಾನ ಕಲಾವಿದರಿಗೆ ಆರೋಗ್ಯ ತಪಾಸಣೆ


ಕಟೀಲು : ಇಲ್ಲಿನ ಯಕ್ಷಗಾನ ಮೇಳಗಳು ಹಾಗೂ ಕಟೀಲು ದೇಗುಲದ ಸಿಬಂದಿಗಳಿಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಶಿಬಿರ ಉದ್ಘಾಟಿಸಿದರು. ಶ್ರೀನಿವಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ವಾಸುದೇವ ಮಾತನಾಡಿ ತಮ್ಮ ಆಸ್ಪತ್ರೆಯಲ್ಲಿ ಇರುವ ಅನೇಕ ಸೌಲಭ್ಯಗಳನ್ನು ಅರ್ಹರು ಬಳಸಿಕೊಳ್ಳಬೇಕು. ಸಾಮಾಜಿಕವಾಗಿಯೂ ತಮ್ಮ ಆಸ್ಪತ್ರೆ ಜನರ ಬಳಿಗೆ ಹೋಗುತ್ತಿದೆ ಎಂದು ತಿಳಿಸಿದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ್ಯ ಸುರೇಶ್ ಭಟ್, ಶ್ರೀನಿವಾಸ ಸಂಸ್ಥೆಯ ಜನಾರ್ದನ ಮತ್ತಿತರರಿದ್ದರು.


ತಿರುಗಾಟ ಮುಗಿಸಿ, ಒಳಗಾದ ಕಟೀಲು ಮೇಳ



ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಐದೂ ಮೇಳಗಳ ಈ ವರುಷದ ತಿರುಗಾಟ ಮುಗಿಸಿ, ಒಳಗಾದವು. ಮುಂದಿನ ತಿರುಗಾಟ ನವೆಂಬರ್‌ನಲ್ಲಿ ಆರಂಭಗೊಳ್ಳಲಿದೆ.
ಚಿತ್ರ ಈಮೆಲ್

Friday, May 24, 2013

ಕಟೀಲಿನಲ್ಲಿ ಯಕ್ಷಗಾನ ಕಲಾವಿದರಿಗೆ ಆರೋಗ್ಯ ಶಿಬಿರ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲಿನ ಐದೂ ಯಕ್ಷಗಾನ ಮೇಳಗಳ ಕಲಾವಿದರು ಹಾಗೂ ಕಟೀಲು ದೇಗುಲದ ಸಿಬಂದಿಗಳು ಮತ್ತವರ ಕುಟುಂಬಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ತಾ.೨೬ರ ಭಾನುವಾರ ಸುರತ್ಕಲ್ ಮುಕ್ಕದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಕಾಲೇಜು ಸಂಶೋಧನೆ ಕೇಂದ್ರದ ವೈದ್ಯರಿಂದ ಆಯೋಜಿಸಲಾಗಿದೆ ಎಂದು ಕಟೀಲು ದೇಗುಲ, ಯಕ್ಷಗಾನ ಮಂಡಳಿ ಹಾಗೂ ಝೇಂಕಾರ ಬಳಗದ ಪ್ರಕಟನೆ ತಿಳಿಸಿದೆ.
ಯಕ್ಷಗಾನ ತಿರುಗಾಟ ಶನಿವಾರ ಕೊನೆಗೊಳ್ಳಲಿದ್ದು, ಮರುದಿನ ಆರೋಗ್ಯ ತಪಾಸಣೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ. ಉದ್ಘಾಟನೆ ಸಂದರ್ಭ ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಶ್ರೀನಿವಾಸ ಸಂಸ್ಥೆಯ ಎಂ.ಆರ್.ವಾಸುದೇವ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ.

ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ


ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ
ರಜಾಕಾಲದಲ್ಲಿ ಹಿಮ್ಮೇಳ ಕಾರ‍್ಯಾಗಾರ, ಕಲಾವಿದರು ಸಿಕ್ಕರೆ ಆರನೇ ಮೇಳ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಪತ್ತನಾಜೆಯ ಮರುದಿನ (ತಾ.೨೫) ಮುಗಿಯಲಿದೆ. ಮುಂದಿನ ತಿರುಗಾಟ ದೀಪಾವಳಿಯ ಅನಂತರ ಅಂದರೆ ನವೆಂಬರ್ ೭ರಂದೇ ಆರಂಭವಾಗಲಿದೆ. ಈವರೆಗೆ ದೇಗುಲದಲ್ಲಿ ದೀಪೋತ್ಸವದ ಬಳಿಕ ಮೇಳಗಳ ತಿರುಗಾಟ ಆರಂಭವಾಗುತ್ತಿದ್ದರೆ ಈ ಬಾರಿ ಸುಮಾರು ಇಪ್ಪತ್ತು ದಿನಗಳ ಮುಂಚಿತವಾಗಿಯೇ ತಿರುಗಾಟ ಆರಂಭವಾಗಲಿದ್ದು, ೧೧೦ ಆಟಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರಿಂದ ಹರಕೆಯಾಟ ಆಡಿಸುವ ಭಕ್ತರಿಗೆ ಪ್ರಯೋಜನವಾಗಲಿದೆ. ಮುಂದಿನ ಇಪ್ಪತ್ತೈದು ವರ್ಷಗಳವರೆಗೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಹರಕೆಯಾಟಗಳು ಕಟೀಲು ಮೇಳಗಳಿಗೆ ಬುಕ್ಕಿಂಗ್ ಆಗಿರುವುದು ದಾಖಲೆಯಾಗಿದೆ.
ಯಕ್ಷಗಾನ ಕಲಾವಿದರ ಕೊರತೆ ಇರುವುದರಿಂದ ಮುಂದಿನ ವರುಷಕ್ಕೆ ಆರನೆಯ ಮೇಳ ತಿರುಗಾಟ ಪ್ರಾರಂಭಿಸುವ ಯೋಚನೆಗೆ ಒಂದಿಷ್ಟು ಹಿನ್ನಡೆಯಾಗಿದ್ದರೂ ಹೆಚ್ಚುವರಿ ಕಲಾವಿದರ ಸೇರ್ಪಡೆಯಾದರೆ ಆರನೆಯ ಮೇಳ ಕಟೀಲಿನಿಂದ ಹೊರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಹಿಮ್ಮೇಳ ಕಾರ‍್ಯಾಗಾರ
ಎರಡು ವರುಷಗಳ ಹಿಂದೆ ಶ್ರೀ ದೇವೀ ಮಾಹಾತ್ಮ್ಯ ಕಾರ‍್ಯಾಗಾರ ನಡೆದಿದ್ದು, ಈ ಬಾರಿ ಕಟೀಲಿನಲ್ಲೇ ಜೂನ್ ೯ಮತ್ತು ೧೦ರಂದು ಹಿಮ್ಮೇಳ ಕಾರ‍್ಯಾಗಾರವನ್ನು ಆಯೋಜಿಸಲಾಗಿದೆ. ಈ ಮೂಲಕ ಕಟೀಲು ಮತ್ತು ತೆಂಕುತಿಟ್ಟಿನ ಇತರ ಮೇಳಗಳ ಹಿಮ್ಮೇಳವನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನ ನಡೆಯಲಿದೆ. ಈ ಕಾರ‍್ಯಾಗಾರಕ್ಕೆ ಕಟೀಲು ದೇಗುಲದೊಂದಿಗೆ ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗ ನೀಡಲಿದೆ.
ಕಟೀಲು ಮೇಳಗಳ ಕಲಾವಿದರಿಗೆ ಮಳೆಗಾಲದ ರಜಾ ಕಾಲದಲ್ಲೂ ಗೌರವ ಧನವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಕ್ಷಗಾನಾಸಕ್ತ ಉದ್ಯಮಿಗಳು ಸೇರಿ ಸಂಘಟಿಸುವ ಯಕ್ಷ ಧರ್ಮ ಬೋಧಿನೀ ಟ್ರಸ್ಟ್ ಐದು ಮೇಳಗಳಿಗೆ ನೀಡಿರುವ ಬಸ್ಸು ಹಾಗೂ ರಂಗಸ್ಥಳಗಳಿಂದ ಸಂಗ್ರಹಿತವಾಗುವ ಬಾಡಿಗೆ ಮೊತ್ತವನ್ನು ರಜಾಕಾಲದ ಗೌರವ ಧನ ನೀಡಲು ಬಳಸಲಾಗುತ್ತಿದ್ದು ಸುಮಾರು ಹದಿನೈದು ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತದೆ. ಮೇಳಗಳ ಎಲ್ಲ ಕಲಾವಿದರಿಗೂ ಆರೋಗ್ಯ ವಿಮೆಯನ್ನೂ ಮಾಡಲಾಗಿದೆ.