Tuesday, June 11, 2013

ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ ಅಧ್ಯಯನ ಕಮ್ಮಟ

ಕಟೀಲು : ಆಧುನಿಕತೆ ಜೊತೆಗೆ ಪರಂಪರೆಯ ಉಳಿಸುವಿಕೆ ಎಲ್ಲ ಕಲಾಪ್ರಾಕಾರಗಳಂತೆ ಯಕ್ಷಗಾನಕ್ಕೂ ಅತ್ಯಗತ್ಯವಿದೆ ಎಂದು ಸಚಿವ ಅಭಯಚಂದ್ರ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ಎರಡು ದಿನಗಳ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದುರ್ಗಾಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನ ಸಚ್ಚಿದಾನಂದ ಶೆಟ್ಟಿ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಕಟೀಲು ಮೇಳಗಳ ದೇವೀಪ್ರಸಾದ ಶೆಟ್ಟಿ ಮುಂತಾದವರಿದ್ದರು. ಸದಸ್ಯ ಸಂಚಾಲಕ ಪದ್ಮನಾಭ ಗೌಡ ಸ್ವಾಗತಿಸಿದರು. ಅಶೋಕ್ ಭಟ್ ಉಜಿರೆ ಕಾರ‍್ಯಕ್ರಮ ನಿರೂಪಿಸಿದರು.
 ನೂರಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿದ ಈ ಕಮ್ಮಟಕ್ಕೆ ಕಟೀಲು ದೇವಸ್ಥಾನ, ದುರ್ಗಾ ಮಕ್ಕಳ ಮೇಳ, ಹಾಗೂ ಕಟೀಲು ಯಕ್ಷಗಾನ ಮೇಳಗಳು ಸಹಕಾರ ನೀಡಿವೆ.

ಸಮಾರೋಪ
ಮದ್ದಲೆಯಲ್ಲಿ ಇಪ್ಪತ್ತೈದು ಸ್ವರಗಳಿವೆ ಅಂತ ರಾಘವ ನಂಬಿಯಾರ್ ಹೇಳಿದಾಗ ಖ್ಯಾತ ಮದ್ದಲೆ ವಾದಕ ೨೮ಸ್ವರಗಳನ್ನು ಬಾರಿಸಿ ತೋರಿಸಿದರು. 
ಬಲಿಪ ನಾರಾಯಣ ಭಾಗವತರು ಸುಧನ್ವಾರ್ಜುನದ ಒಂದೇ ಪದ್ಯವನ್ನು ಎಲ್ಲ ತಾಳಗಳಲ್ಲೂ ಹಾಡಿ ತೋರಿಸಿದರು.
ಆದಿತಾಳಕ್ಕೆ ಬಿಡ್ತಿಗೆಯಿಲ್ಲ ಎಂಬುದು ಬಹು ಚರ್ಚೆಯಾಗಿ ನಿರ್ಣಯವಾಗದೆ ಕೊನೆಗೆ ತಾಳಗಳಿಗೇ ಬೇರೆ ಗೋಷ್ಟಿ ಮಾಡುವುದು ಎಂದಾಯಿತು. 
ಗೋವಿಂದ ಭಟ್ ಮತ್ತು ಕೋಳ್ಯೂರು ರಾಮಚಂದ್ರ ರಾವ್ ಬಹು ಹುರುಪಿನಿಂದ ಅತಿಕಾಯ ಲಕ್ಷ್ಮಣನ ಯುದ್ಧ, ಧಕ್ಷಾಧ್ವರ ಕೆಲ ಭಾಗಗಳನ್ನು ಪ್ರಾತ್ಯಕ್ಷಿಕೆಗೆ ಕುಣಿದು ತೋರಿಸಿದರು.
ಪಂಚವಟಿಯ ರಾಘವ ನರಪತೆಯನ್ನು ಬಲಿಪ, ತೆಂಕಬೈಲು, ಪುಂಡಿಕಾಯಿ, ಬಲಿಪ ಶಿವಶಂಕರ, ಲೀಲಾವತಿ ಬೈಪಾಡಿತ್ತಾಯ, ಕುಬಣೂರು ಹೀಗೆ ಆರು ಬೇರೆ ಬೇರೆ ಶೈಲಿಗಳಲ್ಲಿ ಹಾಡಿ ತೋರಿಸಿದ್ದಕ್ಕೆ ಎಂಭತ್ತರ ಗೋವಿಂದ ಭಟ್, ಕೋಳ್ಯೂರು, ದಿವಾಣ ಶಿವಶಂಕರ ಭಟ್ ಅಭಿನಯಿಸಿದರು.
ಇದೆಲ್ಲ ನಡೆದದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಎರಡನೆಯ ದಿನವಾದ ಸೋಮವಾರ.
ಕಟೀಲು ಮೇಳಗಳ ಕಲಾವಿದರೂ ಸೇರಿದಂತೆ ಹಿಮ್ಮೇಳ ಕಲಾವಿದರ ಭಾಗವಹಿಸುವಿಕೆ ಕಡಿಮೆ ಪ್ರಮಾಣದಲ್ಲಿದ್ದರೂ, ಭಾಗವಹಿಸಿದ ಹಿರಿಯ ವಿದ್ವಾಂಸರ, ಕಲಾವಿದರ ಅಭಿಪ್ರಾಯದಂತೆ ಎರಡು ದಿನಗಳಲ್ಲಿ ಇದಕ್ಕಿಂತ ಚಂದವಾಗಿ ಗೋಷ್ಟಿಯನ್ನು ಮಾಡಲಾಗದು ಎಂಬಷ್ಟು ಪರಿಣಾಮಕಾರಿಯಾಗಿ ಗೋಷ್ಟಿ ಮೂಡಿ ಬಂದಿದೆ.
ಅಧ್ಯಯನ, ತರಬೇತಿಗಳ ಮೂಲಕ ಯಕ್ಷಗಾನ ಕಲಾವಿದರನ್ನು ಬೆಳೆಸಿ, ಯಕ್ಷಗಾನ ಕಲೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಬೇಕೆಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು..
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಮಾಯಣ, ಮಹಾಭಾರತಗಳನ್ನು ಜನರಿಗೆ ಸುಲಭವಾಗಿ ತಿಳುಸವ ಮಾಧ್ಯಮವಾದ ಯಕ್ಷಗಾನ ಮತ್ತದರ ಕಲಾವಿದರು ಅಭಿನಂದನೀಯರು ಎಂದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು. ರಾಘವೇಂದ್ರ ನಂಬಿಯಾರ್ ಕಮ್ಮಟದ ಬಗ್ಗೆ ಮಾತನಾಡಿದರು. ಯು.ದುಗ್ಗಪ್ಪ ಸ್ವಾಗತಿಸಿದರು. ಪದ್ಮನಾಭ ಗೌಡ ಬಿಲಿನೆಲೆ ಕಾರ‍್ಯಕ್ರಮ ನಿರೂಪಿಸಿದರು.

No comments:

Post a Comment