Sunday, July 6, 2014

ಖ್ಯಾತ ದೇವೀ ಪಾತ್ರಧಾರಿ ಕಡಂದೇಲು ಪುರುಷೋತ್ತಮ ಭಟ್ ನಿಧನ

ಪ್ರಸ್ತುತ ಇದ್ದ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿದ್ದ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ಇತ್ತೀಚಿಗಷ್ಟೇ ಶತ ಶಂಭ್ರಮವನ್ನು ಕಂಡ ಕಡಂದೇಲು ಪುರುಸೋತ್ತಮ ಭಟ್ಟರು ಜುಲೈ 5ರ ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು.
ಕಟೀಲಿನಲ್ಲೇ ವಾಸವಿದ್ದ ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವ ಸಂದಿದೆ.
ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇತ್ತೀಚಿನವರೆಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುತ್ತಿದ್ದ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು.
ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖುಷಿಪಟ್ಟುಕೊಳ್ಳುತ್ತಿzದ್ದ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರು ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜವಾಗಿದ್ದರು. ಭಟ್ಟರಿಗೆ ೫ ಗಂಡು, ೧ಹೆಣ್ಣು ಮಕ್ಕಳು.



No comments:

Post a Comment