Thursday, August 25, 2011

ದೇವೀ ಮಾಹಾತ್ಮ್ಯೆ ಕಾರ್ಯಾಗಾರ








ದೇವಿ ಮಹಿಷ ಶುಂಭ ನಿಶುಂಭ, ರಕ್ತಬೀಜಾದಿ ಅಸುರರನ್ನು ಕೊಂದಾಕ್ಷಣ ರಂಗಸ್ಥಳದ ಪಕ್ಕದಲ್ಲಿ ಕೊಂಬಳಕಾಯಿಯನ್ನು ತುಂಡರಿಸಿ, ಅದಕ್ಕೆ ಕುಂಕುಮಭರಿತ ನೀರನ್ನು( ತುಳುವಿನಲ್ಲಿ ಕುರ್‌ನೀರ್) ಹಾಕುವ ನಂಬಿಕೆಯಿದೆ.

















ಮಾದರಿ ಪ್ರದರ್ಶನಕ್ಕಾಗಿ ೨೧ನಿರ್ಣಯಗಳುಬಜಪೆ : ಪ್ರಸಂಗ ಪಠ್ಯದಲ್ಲಿನ ಮೂಲಾಧಾರವಿಲ್ಲದ ಅಂಶಗಳನ್ನು ಗೌಣವಾಗಿಸಿ ಪ್ರಸ್ತುತಪಡಿಸುವುದು, ತ್ರಿಮೂರ್ತಿಗಳು ಸಂವಾದದಲ್ಲಿ ಘನತೆಯನ್ನು ಇನ್ನಷ್ಟು ಹೆಚ್ಚಿಸುವುದು ಮತ್ತು ನೃತ್ಯಾಭಿನಯಗಳಲ್ಲಿ ಪ್ರಾತ್ಯಕ್ಷಿಕೆಯ ಮಾರ್ಗದರ್ಶನವನ್ನು ಪಾಲಿಸುವುದು, ಮಧುಕೈಟಭರನ್ನು ಕಿರೀಟ ವೇಷದಲ್ಲಿ ಮಾಡುವುದು, ಸಂಭಾಷಣೆಗಳಲ್ಲಿನ ಅಬದ್ಧಗಳನ್ನು ನಿವಾರಿಸುವುದು, ಪುರೋಹಿತ ಹಾಸ್ಯವನ್ನು ರಾಕ್ಷಸ ಪುರೋಹಿತರಿಗೆ ಒಪ್ಪುವಂತೆ ಪರಿಷ್ಕರಿಸುವುದು, ಪಿಂಗಲಾಕ್ಷನ ಕಣ್ಣನ್ನು ಹೆಸರಿಗನುವಾಗಿ ಸ್ವಲ್ಪ ಕೆಂಪಾಗಿ ಚಿತ್ರಿಸುವುದು, ಮಹಿಷಾಸುರ ಸಭೆಯಲ್ಲಿ ಪ್ರವೇಶಿಸುವುದಕ್ಕೆ ಗರಿಷ್ಠ ಅವಧಿ ೧೫ನಿಮಿಷ ಮಾತ್ರ, ಸಿಂಹವನ್ನು ಯಕ್ಷಗಾನೀಯವಾಗಿಸುವುದು, ಮಾಲಿನಿ, ಪತಿ ವಿದ್ಯುನ್ಮಾಲಿ ಮಡಿದಾಗ, ಮಹಿಷ ರಂಗಸ್ಥಳಕ್ಕೆ ಬರುವ ಸಂದರ್ಭ ಚೌಕಿಗೆ ಹೋಗಿ ಸೀರೆ ಬದಲಾಯಿಸಿ ಬದರೆ, ರಂಗಸ್ಥಳದಲ್ಲೇ ಇದ್ದು, ತಿಲಕ ಅಳಿಸಿ ವೈಧವ್ಯ ತೋರಿಸುವುದು, ಈವರೆಗೆ ಬರುತ್ತಿದ್ದ ತೆಬಿಟ್ಟ ವೇಷದ ಬದಲಿಗೆ ಚಂಡಮುಂಡರಿಗೆ ಪಗಡಿ ಕಟ್ಟಿ, ಮುಖದಲ್ಲಿ ಕ್ರೌರ್ಯ ಕಾಣಿಸುವಂತೆ ಬಣ್ಣ ಬರೆದು ಪ್ರಸ್ತುತ ಪಡಿಸುವುದು, ನೃತ್ಯಾಭಿನಯದಲ್ಲಿ ಏಕತಾನತೆ ನಿವಾರಿಸುವುದು, ಸುಗ್ರೀವನನ್ನು ಧರ್ಮರಾಯನ ಹಾಗೆ ಕಿರೀಟ ಇಟ್ಟು ಬಿಳಿ ಗಡ್ಡ ಕಟ್ಟಿ ಮಾಡುವುದು, ಮಹಿಷ ಮರ್ಧಿನಿ ಮತ್ತು ಕೌಶಿಕೆಯನ್ನು ನೆರಿಗೆ ಉಟ್ಟು ಅಷ್ಟಭುಜ ಮತ್ತು ಪುಷ್ಪಾಲಂಕರಗಳಿಲ್ಲದೆ ಕಿರೀಟ ಕರ್ಣಪತಿ ಕೆನ್ನೆಪೂ ಆಭರಣಗಳಿಮದ ಅಲಂಕರಿಸಿ ಪ್ರಸ್ತುಪಡಿಸುವುದು, ರಕ್ತೇಶ್ವರಿಯನ್ನು ಅಣಿಕಟ್ಟಿ ಮಾಡದೆ ಕುತ್ತರಿ ಧರಿಸಿ ವೀರಗಾಸೆಯನ್ನು ನಾಲಗೆಯಾಗಿಸಿ ಮಾಡುವುದು, ಅಪ್ರಾಸಂಗಿಕವಾದ ಪಾತ್ರಿಯ ಪಾತ್ರವನ್ನು ನಿವಾರಿಸುವುದು, ಚಂಡಿಕೆಯನ್ನು(ಕಾಳಿ) ಪಚ್ಚೆ ಬಣ್ಣ ಬಳಿದು ರೌದ್ರ ಬಣ್ನ ಬರೆದು ರೌದ್ರ ಬಿಂಬಿಸಿ ಕಪ್ಪು ದಗಲೆ ಹಾಕಿ ಮಾಡುವುದು, ರಕ್ತಬೀಜನ ಪಾತ್ರವನ್ನು ಚಕ್ರನಾಮ ಹಾಕಿ ವಿಸೇಷ ಭಕ್ತಭಾವಗಳಿಲ್ಲದೆ ನಿರ್ವಹಿಸುವುದು ಸೇರಿದಂತೆ ೨೧ನಿರ್ಣಯಗಳನ್ನು ದೇವೀ ಮಾಹಾತ್ಮ್ಯೆಯ ಮೂರು ದಿನಗಳ ಪ್ರದರ್ಶನ, ಸಂವಾದಗಳ ಬಳಿಕ ಕೈಗೊಳ್ಳಲಾಗಿದ್ದು, ಇವುಗಳನ್ನು ಮಾದರಿ ಪ್ರದರ್ಶನಕ್ಕಾಗಿ ಮಾಡಲಾಗಿದೆ. ಮೇಳಗಳು ಹಾಗೂ ಪ್ರದರ್ಶನ ಮಾಡುವ ಹವ್ಯಾಸಿಗಳು ಅಗತ್ಯ ಕಂಡರೆ ಅನುಸರಿಸಬಹುದಾಗಿದೆ ಎಂದು ಶಿಬಿರದಲ್ಲಿ ಘೋಷಿಸಲಾಗಿದೆ.ಕಟೀಲು ಮೇಳಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರುಣಾಸುರ ಪಾತ್ರವನ್ನು ದೇವೀಮಾಹಾತ್ಮ್ಯೆಗೆ ಸೇರಿಸಲಾಗಿದೆ. ಪ್ರದರ್ಶನಗಳಲ್ಲಿ ಸಿಡಿಮದ್ದು, ವಾದ್ಯಬ್ಯಾಂಡುಗಳಿಂದ ಕಲಾವಿದರಿಗೆ ತೊಂದರೆಯಾಗಿರುವ ಬಗ್ಗೆ ಚರ್ಚಿತವಾಯಿತು. ಆಟ ಆಡಿಸುವ ಭಕ್ತರ ಮನ ಒಲಿಸಿ ವಾದ್ಯಬ್ಯಾಂಡು, ಸಿಡಿಮದ್ದುಗಳ ಬಳಕೆಯನ್ನು ಚೌಕಿಪೂಜೆಗಷ್ಟೇ ಸೀಮಿತಗೊಳಿಸಿ, ಆಟ ಪ್ರದರ್ಶನದ ಸಮಯದಲ್ಲಿ ಕಡಿಮೆಗೊಳಿಸುವುದು ಎಂದು ತಿಳಿಸಲಾಯಿತು.





ಮಹಿಷನಿಗೆ ಕಿರೀಟದಲ್ಲಿ ಕೊಂಬಿಗೆ ಒಪ್ಪದ ವಿದ್ವಾಂಸರು

ದೇವೀ ಮಾಹಾತ್ಮ್ಯೆಯ ಮಹಿಷಾಸುರ ವೇಷಕ್ಕೆ ಈಗ ಇರುವ ನಾಟಕೀಯ ಕೊಂಬಿನ ಬದಲು ಕಿರೀಟ ಕಟ್ಟಿ ಅದಕ್ಕೆ ಸಣ್ಣ ಕೊಂಬುಗಳನ್ನು ಇಟ್ಟರೆ ಹೇಗೆ ಎಂಬ ಅಭಿಪ್ರಾಯಕ್ಕೆ ಬಜಪೆಯಲ್ಲಿ ನಡೆದ ಶ್ರೀ ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನಗಳ ಅಧ್ಯಯನ ಶಿಬಿರದಲ್ಲಿ ವಿದ್ವಾಂಸರು, ಕಲಾವಿದರು ಒಪ್ಪಿಗೆ ಸೂಚಿಸಲಿಲ್ಲ. ಈಗ ಇರುವ ಕೊಂಬಿನ ವೇಷವೇ ಚೆಂದ. ಕಿರೀಟಕ್ಕೆ ಕೊಂಬು ಅಳವಡಿಸಿದರೆ ಚಂದಕ್ಕೂ ಕೊರತೆ, ಕುಣಿತಕ್ಕೂ ಕಷ್ಟ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸಿದರು.

ನಾಟ್ಯಶಾಸ್ತ್ರ ಪ್ರಕಾರದಂತೆ ರೂಪಿಸಿದ ದೇವೀ ಪಾತ್ರದ ಹೊಸ ವಿನ್ಯಾಸದ ವೇಷಕ್ಕೆ ಭವ್ಯತೆ ಇದೆ ಆದರೆ ದಿವ್ಯತೆ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಬಂದ ಹಿನ್ನಲೆಯಲ್ಲಿ ನಿರ್ಣಯವು ಮುಂದೂಡಲ್ಪಟ್ಟಿತು.ವಿದ್ಯುನ್ಮಾಲಿ ಪಾತ್ರ ಬೇಕೇ ಬೇಡವೇ ಎಂಬುದೂ ಚರ್ಚೆಗೊಳಗಾಯಿತು. ಹಿಂದೆ ಈ ಪಾತ್ರ ಇರಲಿಲ್ಲ. ನಾನು ಬಂದ ಮೇಲೆ ಸೇರಿಸಿದ್ದು ಎಂದವರು ಬಲಿಪ ನಾರಾಯಣ ಭಾಗವತರು. ವಿದ್ಯುನ್ಮಾಲಿಯ ಮದುವೆ, ಪುರೋಹಿತರ ವೇಷಗಳ ಬಗ್ಗೆಯೂ ಜಿಜ್ಞಾಸೆ ನಡೆಯಿತು. ಚಂಡಮುಂಡರ ಪಾತ್ರಗಳು ಇನ್ನಷ್ಟು ಸುಧಾರಿಸಬೇಕು ಎಂದ ಗೋವಿಂದ ಭಟ್ಟರು ಅಕ್ಷಗತಿ, ರಥಗತಿ, ಗಜಗತಿಗಳ ಪ್ರಾತ್ಯಕ್ಷಿಕೆಯನ್ನು ಚೆನ್ನಾಗಿ ತೋರಿಸಿಕೊಟ್ಟರು. ಮಧುಕೈಟಭರು ನಾಟಕೀಯ ವೇಷಗಳ ಬದಲಾಗಿ ಕಿರೀಟಕಟ್ಟಿ ಪಾತ್ರಗಳನ್ನು ಯಕ್ಷಗಾನೀಯವಾಗಿಸುವುದು, ಬ್ರಹ್ಮ ವಿಷ್ಣು ಮಹೇಶ್ವರರ ಮಾತುಗಳನ್ನು ಘನತೆಗನುಗುಣವಾಗಿ ಚೆನ್ನಾಗಿಸುವುದು, ತ್ರಿಮೂರ್ತಿಗಳ ವೇಷ ಪಗಡಿ ಕಟ್ಟಿ ಮಾಡುವುದು ಹೀಗೆ ಕೆಲ ನಿರ್ಣಯಗಳಾದವು.ಪ್ರೇಕ್ಷಕನಿಗೆ ಮನೋರಂಜನೆ ನೀಡುವುದು ಮುಖ್ಯ ಎಂಬ ಅಭಿಪ್ರಾಯ ಕಲಾವಿದರಿಂದ ವ್ಯಕ್ತವಾದಾಗ ಜನರ ಮಟ್ಟಕ್ಕೆ ಕಲೆಯನ್ನು ತೆಗೆದುಕೊಂಡು ಹೋಗದೆ ಕಲೆಯ ಮಟ್ಟಕ್ಕೆ ಪ್ರೇಕ್ಷಕನನ್ನು ಎತ್ತರಕ್ಕೇರಿಸಬೇಕು. ದೇವರ ಹೆಸರಿನಲ್ಲಿ ಹೊರಡುವ ಮೇಳಗಳು ಆಧ್ಯಾತ್ಮ ಜಾಗೃತಿ ಮಾಡಬೇಕೆಂದರು ವಿದ್ವಾಂಸರು. ದೇವೀ ಮಾಹಾತ್ಮ್ಯೆಯನ್ನು ಜನರು ಭಕ್ತಿಯಿಂದ ಆಡಿಸುತ್ತಾರೆ. ಐದು ಸಾವಿರ ರೂ.ನ ಹೂವುಗಳನ್ನು ದೇವೀ ಪಾತ್ರಧಾರಿಗೆ ಹಾಕುತ್ತಾರೆ. ಮಹಿಷಾಸುರನನ್ನು ಹಾಲು ಕೊಟ್ಟು ವೈಭವದಿಂದ ರಂಗಸ್ಥಳಕ್ಕೆ ಬರುವಂತೆ ಮಾಡುತ್ತಾರೆ. ದೇವೀ ಪ್ರತ್ಯಕ್ಷವಾದಾಗ ಕರ್ಪೂರ ಇಟ್ಟು ಎದ್ದು ನಿಂತು ಕೈಮುಗಿಯುವವರೂ ಇದ್ದಾರೆ ಎಂಬ ಅಭಿಪ್ರಾಯಗಳು ದೇವೀಮಾಹಾತ್ಯೆಯನ್ನು ಕಲಾ ದೃಷ್ಟಿಗಿಂತಲೂ ಭಾವನಾತ್ಮಕವಾಗಿ ನೋಡಬೇಕು ಎಂಬ ವಾದಕ್ಕೆ ವ್ಯಕ್ತವಾದವು. ಸಿಡಿಮದ್ದು ವಾದ್ಯ ಬ್ಯಾಂಡುಗಳು ಕಲಾವಿದರಿಗೆ ಕಿರಿಕಿರಿ ಮಾಡುತ್ತವೆ ಎಂಬ ಅಭಿಪ್ರಾಯವೂ ಕೇಳಿಬಂತು.ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಕುಂಬ್ಳೆ ಸುಂದರ ರಾವ್, ಸುಣ್ಣಂಬಳ ವಿಶ್ವೇಶ್ವರ ರಾವ್, ಎಂ.ಎಲ್.ಸಾಮಗ, ಕುಷ್ಟ ಗಾಣಿಗ, ದಿವಾಣ ಭೀಮ ಭಟ್, ಕೋಳ್ಯೂರು ರಾಮಚಂದ್ರ ರಾವ್, ರೆಂಜಾಳ ರಾಮಕೃಷ್ಣ ರಾವ್, ಉಜಿರೆ ಅಶೋಕ್ ಭಟ್, ಶ್ರೀಹರಿ ಆಸ್ರಣ್ಣ, ಕೆ.ಎಲ್.ಕುಂಡಂತಾಯ, ಬಲಿಪ ನಾರಾಯಣ ಭಾಗವತ. ಗಂಗಯ್ಯ ಶೆಟ್ಟಿ, ದಿನೇಶ್ ಕಾವಳಕಟ್ಟೆ, ದೇವಕಾನ ಕೃಷ್ಣ ಭಟ್, ಡಾ. ನಾರಾಯಣ ಶೆಟ್ಟಿ, ಶ್ರೀಧರ ಹಂದೆ, ವಾಸುದೇವ ರಂಗ ಭಟ್ ಮುಂತಾದ ಅನೇಕರು ಚರ್ಚೆಗಳಲ್ಲಿ ಪಾಲ್ಗೊಂಡರು.



ರಕ್ತೇಶ್ವರೀ ಅಣಿಕಟ್ಟಿ ಬರುವುದು ಮತ್ತು ದೈವದ ಪಾತ್ರಿ ಪಾತ್ರಗಳು ಕಲಾತ್ಮಕ ದೃಷ್ಟಿಯಿಂದ ದೇವೀ ಮಾಹಾತ್ಮ್ಯೆ ಪ್ರಸಂಗಕ್ಕೆ ಅಪ್ರುಸ್ತತ. ರಕ್ತೇಶ್ವರೀ ದೇವಿಯ ಶಕ್ತಿರೂಪವೇ ಹೊರತು ದೈವವಲ್ಲ. ಹಾಗಾಗಿ ಅಣಿ ಬೇಡ. ಕರಿಟ ಕಟ್ಟಿ ನಾಲಗೆ ಧರಿಸಿ ಬರಲಿ ಎಂಬುದು ವಿದ್ವಾಂಸರ ಅಭಿಪ್ರಾಯ. ಹಾಗಾಗಿ ಈ ವೇಷಗಳಿನ್ನು ದೇವೀಮಾಹಾತ್ಮ್ಯೆಯಲ್ಲಿ ಅದರಲ್ಲೂ ಕಟೀಲು ಮೇಳಗಳಲ್ಲಿ ಕಾಣಲಾರವು.














ಬಜಪೆಯಲ್ಲಿ ನಡೆದ ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನಗಳ ಅಧ್ಯಯನ ಶಿಬಿರದ ಚಿತ್ರಗಳು

No comments:

Post a Comment