Friday, February 18, 2011

ನಂದಿನಿ ನದಿ ಅವತರಣ ದಿನ







ನಂದಿನಿ ನದಿ ಅವತರಣ ದಿನ
ಹೀಗೊಂದು ಕಲ್ಪನೆಯೇ ಎಷ್ಟೊಂದು ಚೆಂದ!ನದೀ ನಂದಿನೀಯ ಅವತರಣ ದಿನ ಅಥವಾ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ!
ಇದು ಪುರಾಣ ಕಥೆಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ. ಎಲ್ಲೆಲ್ಲಿಯೂ ಜನರ ಹಾಹಾಕಾರ. ಇದರಿಮದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿ, ಕಾಮಧೇನುವನ್ನು ಕರೆತರಲು ದೇವಲೋಕಕ್ಕೆ ಹೋದನು. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನೀಯನ್ನು ಕಳುಹಿಕೊಡುವುನೆಂದೂ ಹೇಳಿದನು. ಅದರಂತೆ ನಂದಿನೀಯನ್ನು ಕರೆದು, 'ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು' ಎಂದನು. ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ತಪ್ಪನ್ನರಿತ ನಂದಿನಿ ಮುನಿಯನ್ನು ಯಾಚಿಸಲು, ಕರುಣಾರ್ದ್ರ ಹೃದಯನಾಗಿ, ಆದಿಮಾಯೆಯನ್ನು ಸ್ತುತಿಸು. ಅವಳೇ ನಿನಗೆ ವಿಶಾಪದ ದಾರಿಯನ್ನು ತೋರುವಳು ಎಂದನು.ನಂದಿನೀ ಅನನ್ಯ ಭಕ್ತಿಯಿಂದ ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾದಳು; ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವಿತ್ತಳು.ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು.ಅರುಣಾಸುರನನ್ನು ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾಥೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯವನ್ನಿತ್ತು, ಲಿಂಗಕ್ಯಳಾದಳು.
೪೦ಕಿಲೋ ಮೀಟರ್...ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನೀಯ ಉದ್ದ ೪೦ಕಿಲೋ ಮೀಟರ್. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ.ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್ ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು, ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ.
ದೇಗುಲಗಳನ್ನು ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.
ಕಟೀಲಿನಲ್ಲಿಂದು ವಿಶೇಷನಂದಿನೀ ಅವತರಣ ದಿನವಾದ ತಾ.೧೮ ಕಟೀಲಿನಲ್ಲಿ ಭ್ರಾಮರಿಗೆ ಒಂದು ಸಾವಿರ ಗೆಂದಾಳಿ ಬೊಂಡ ಸೇರಿದಂತೆ ನಾಲ್ಕು ಸಾವಿರ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಕ್ಷೀರ ಪಾಯಸ ಸೇವೆ ಇದೆ. ಮಧ್ಯಾಹ್ನ ತಾಳಮದ್ದಲೆ, ಯಕ್ಷಗಾನ, ನೃತ್ಯ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ನಂದಿನೀ ನದಿಯಲ್ಲಿ ತೀರ್ಥ ಸ್ನಾನ ವಿಶೇಷವಾಗಿದೆ.

1 comment: