Tuesday, June 30, 2015

ಕಟೀಲಿನಲ್ಲಿ ರಾಮಾಯಣ ಕಥಾ ಮಾಲಿಕೆ

ಕಟೀಲು : ತಂದೆಯ ಮಾತಿನಂತೆ ವನವಾಸಕ್ಕೆ ತೆರಳಿದ ಶ್ರೀ ರಾಮಚಂದ್ರ ಆದರ್ಶ ಪುರುಷನಾಗಿ ಸರ್ವರಿಂದಲೂ ಪೂಜ್ಯನೀಯನೆನಿಸಿದಾತ. ರಾಮರಾಜ್ಯವಾಗಲಿ ಎಂಬ ಆಶಯದ ಹಿಂದೆ ಅವತ್ತಿನ ಆಡಳಿತದ ಶ್ರೇಷ್ಟತೆ ಅರ್ಥೈಸಿಕೊಳ್ಳಬಹುದೆಂದು ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿ ತಿಂಗಳು ರಾಮಾಯಣದ ವಿವಿಧ ಪಾತ್ರಗಳ ಪರಿಚಯ ನೀಡುವ ರಾಮಾಯಣ ಕಥಾ ಮಾಲಿಕೆಯಲ್ಲಿ ಶ್ರೀ ರಾಮನ ಬಗ್ಗೆ ಉಪನ್ಯಾಸವಿತ್ತರು. 
ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಕೆ. ವನಮಾಲಾ ಸ್ವಾಗತಿಸಿದರು. ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಕ್ಷಕ ಸಂಘದ ವೆಂಕಟರಮಣ ಹೆಗ್ಡೆ ವಂದಿಸಿದರು.

Friday, June 12, 2015

ಕಟೀಲು ಸಾಮೂಹಿಕ ವಿವಾಹ :

೮ಜೋಡಿಗಳು ದಾಂಪತ್ಯಕ್ಕೆ ಜೀವನಕ್ಕೆ
ಕಟೀಲು : ಇಲ್ಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಉಸ್ತುವಾರಿಯಲ್ಲಿ ಬುಧವಾರ ನಡೆದ ಎಂಟನೆಯ ವರುಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ಏಳು ವರುಷಗಳಲ್ಲಿ ೭೫ಜೋಡಿಗಳು ವಿವಾಹವಾಗಿದ್ದರೆ ಈ ವರುಷ ಹರೀಶ್ - ಹರಿಣಾಕ್ಷಿ, ಮಹಾಬಲ - ಬೇಬಿ, ಶಿವಕುಮಾರ್ - ಗೀತಾ, ರಂಜಿತ್ - ಸಾವಿತ್ರಿ, ಶಿವಪ್ರಸಾದ ಎ.ಪಿ.- ಯಶೋದಾ, ಸಂದೀಪ್ - ಶ್ವೇತಾ, ವಸಂತ - ವಾಣಿಶ್ರೀ, ಹರಿಪ್ರಸಾದ್ - ಶ್ವೇತಾ ವಿವಾಹವಾದರು.
ಮುಂಬೈನ ಸುವರ್ಣ ಬಾಬಾ, ಅನಿಲ್ ಶೆಟ್ಟಿ, ರಾಘವೇಂದ್ರ ಶಾಸ್ತ್ರಿ, ಕೇಶವ ಅಂಚನ್ ಮುಂಬೈ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಪಿ. ಸತೀಶ್ ರಾವ್, ಧನಂಜಯ ಆಚಾರ್, ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ ಮುಂತಾದವರಿದ್ದರು.

Saturday, June 6, 2015

ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣೆ


ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೯೦ ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದಾನಿ ರಾಜು ಪಿ. ಶೆಟ್ಟಿ ಮುಂಬೈ, ರವೀಶ ಪಿಂಟೋ, ಸಂಸ್ಥೆಯ ಕೇಶವ ಕಟೀಲು, ಪ್ರದೀಪ್ ಶೆಟ್ಟಿ, ಸುವಿನ್ ಆಚಾರ‍್ಯ, ರಮೇಶ್ ಐ.ಕೆ, ಐವನ್ ಡಿಸೋಜ, ಮುಖ್ಯ ಶಿಕ್ಷಕಿ ವನಮಾಲಾ ಕೆ., ಗೋಪಾಲ್  ಮತ್ತಿತರರಿದ್ದರು.

Tuesday, April 28, 2015

ವಿಜಯಾ ಬ್ಯಾಂಕಿನಿಂದ ಕುಡಿಯುವ ನೀರು

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿಜಯಾ ಬ್ಯಾಂಕಿನ ರೀಜನಲ್ ಮೆನೇಜರ್ ಉದಯಕುಮಾರ ಶೆಟ್ಟಿ, ಪ್ರಬಂಧಕಿ ವಿನುತಾ ಪಿ.ವಿ, ದೀಪಾ ಶೆಟ್ಟಿ, ಪ್ರಭಾರ ಆಡಳಿತಾಧಿಕಾರಿ ಶಿವಕುಮಾರಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಪ್ರಬಂಧಕರಾದ ವಿಜಯಕುಮಾರ್ ಉಪಸ್ಥಿತರಿದ್ದರು

ಕಟೀಲು ಕ್ಯಾಲೆಂಡರ್ ಬಿಡುಗಡೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮನ್ಮಥ ಸಂವತ್ಸರದ ದಿನದರ್ಶಿಕೆಯನ್ನು ಬುಧವಾರ ಸೌರಯುಗಾದಿಯಂದು ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು. 
ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ ಶ್ರೀಹರಿ ಆಸ್ರಣ್ಣ, ಪ್ರಬಂಧಕರಾದ ವಿಜಯಕುಮಾರ್ ಉಪಸ್ಥಿತರಿದ್ದರು. 

ದೇಗುಲದ ವಿಶೇಷ ದಿನಗಳು, ಛಾಯಾಚಿತ್ರಗಳನ್ನು ಕ್ಯಾಲೆಂಡರ್ ಒಳಗೊಂಡಿದೆ.

Sunday, April 26, 2015

ಕಟೀಲಿಗೆ ಮುಜರಾಯಿ ಆಯುಕ್ತೆ ಪಲ್ಲವಿ ಭೇಟಿ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತೆ ಪಲ್ಲವಿ ಅಕುರಾತಿ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. 
ಹೊಸದಾಗಿ ಆಗಿರುವ ಚಿನ್ನದ ರಥ, ಕುದ್ರು ಭ್ರಾಮರೀವನದ ಗುಡಿಗಳನ್ನು ಗಮನಿಸಿದರು. ದ್ರವ ತ್ಯಾಜ್ಯ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದ ಆಯುಕ್ತೆ ಪಲ್ಲವಿ ಕಟೀಲು, ದ್ರವ ತ್ಯಾಜ್ಯ ಘಟಕ ಮಾಡಿರುವ ರಾಜ್ಯದ ಮೊದಲ ದೇವಸ್ಥಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ನದಿ ಹಾಗೂ ಪರಿಸರವನ್ನು ಇನ್ನಷ್ಟು ಸ್ವಚ್ಚವಾಗಿರಿಸಲು ಮುತುವರ್ಜಿ ವಹಿಸಲು ಸೂಚಿಸಿದರು. ಬಯೋಗ್ಯಾಸ್ ವ್ಯವಸ್ಥೆ ಅಳವಡಿಸಿ ಅನ್ನದಾನದ ಅಡುಗೆ ತಯಾರಿಸುವ ಬಗ್ಗೆ ಯೋಜನೆ ರೂಪಿಸಲು ಸೂಚಿಸಿದರು. 
ಅನ್ನಛತ್ರ, ಭೋಜನ ವ್ಯವಸ್ಥೆಗಳನ್ನು ನೋಡಿದ ಅವರು ಅನ್ನದಾನಕ್ಕೆ ಮತ್ತು ವಿದ್ಯಾ ದಾನಕ್ಕೆ ೮೦ಜಿ ತೆರಿಗೆ ವಿನಾಯತಿಯ ನೀಡುವ ಮೊದಲ ದೇವಸ್ಥಾನ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಿಟ್ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ನೂತನ ಗೋಶಾಲೆ, ಸಂಸ್ಕೃತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. 
ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಂಗಳೂರು ಸಹಾಯಕ ಆಯುಕ್ತ ಶಿವಕುಮಾರಯ್ಯ, ಅಧಿಕಾರಿಗಳಾದ ಉಮೇಶ ಸುಧಾಕರ, ಪ್ರಬಂಧಕ ವಿಜಯ ಕುಮಾರ್ ಉಪಸ್ಥಿತರಿದ್ದರು.

ಚಿತ್ರ : ಕಟೀಲ್ ಸ್ಟುಡಿಯೋ

ಕಟೀಲು ಜಾತ್ರೆ 2015








Saturday, April 25, 2015

ಕಟೀಲು ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆ

ಇಂಗ್ಲಿಷ್ ಮಾಧ್ಯಮ ಶಾಲೆಯ ಆರಂಭದ ಪ್ರಸ್ತಾಪ
ಕಟೀಲು : ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸುವುದೆಂದು ಗುರುವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಕನ್ನಡ ಮಾಧ್ಯಮದ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಆಗದಂತೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್, ಯಕ್ಷಗಾನ, ಸಂಗೀತ ನೃತ್ಯ ಮುಂತಾದ ಅನೇಕ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ಸವಿನೆನಪಿನಲ್ಲಿ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುವುದು ಅಗತ್ಯವಾಗಿದೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರ್ಷಪೂರ್ತಿ ಕಾರ‍್ಯಕ್ರಮಗಳನ್ನು ಆಯೋಜಿಸುವುದು, ಶಾಲೆಯ ಸವಲತ್ತುಗಳನ್ನು ಇನ್ನಷ್ಟು ಹೆಚ್ಚಿಸುವುದರ ಬಗ್ಗೆ ಸಲಹೆಗಳು ಬಂದವು. 
ದೇಗುಲವು ಈಗಾಗಲೇ ಪ್ರಾಥಮಿಕ ಹಂತದಿಂದ ಪದವಿಯವರೆಗೆ ವರ್ಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಕಳೆದ ಆರೇಳು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗೆ ಎರಡೂವರೆ ಕೋಟಿ ರೂ.ಗಳನ್ನು ವ್ಯಯಿಸಿಲಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು. 
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ನಿವೃತ ಉಪಪ್ರಾಚಾರ‍್ಯ ಉಮೇಶ ರಾವ್ ಎಕ್ಕಾರು, ರುಕ್ಮಯದಾಸ್, ಈಶ್ವರ ಕಟೀಲ್, ಮುಖ್ಯ ಶಿಕ್ಷಕಿ ವನಮಾಲಾ, ಗೋಪಾಲ್, ರಾಜೇಶ್, ಕೃಷ್ಣ, ಪದ್ಮನಾಭ ಭಟ್, ಸಂಜೀವ ಮಡಿವಾಳ, ಕೆ.ವಿ.ಶೆಟ್ಟಿ, ಲೋಕೇಶ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಭಾಸ್ಕರ ದಾಸ್, ಸುಬ್ರಹ್ಮಣ್ಯ ಪ್ರಸಾದ್, ತಿಮ್ಮಪ್ಪ ಕೋಟ್ಯಾನ್, ಭುವನಾಭಿರಾಮ ಉಡುಪ, ನೀಲಯ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Friday, March 13, 2015

katil samoohika vivaha


katil temple samoohika vivaha
8-3-2015randu nadeyitu

Thursday, February 5, 2015

ತಾ. ೯: ಕಟೀಲು ಭ್ರಾಮರೀವನದ ನೂತನ ಗುಡಿಯಲ್ಲಿ ಬ್ರಹ್ಮಕಲಶ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೂಲಸ್ಥಳವಾದ ಭ್ರಾಮರೀ ಅವತಾರವಾಗಿ ಅರುಣಾಸುರನ ಸಂಹಾರವಾದ ಸ್ಥಳ ಇನ್ನು ಮುಂದಕ್ಕೆ ಭ್ರಾಮರೀವನ ಎನಿಸಿಕೊಳ್ಳಲಿದೆ. ಇಲ್ಲಿ ಉದ್ಭವ ಲಿಂಗವಿರುವಲ್ಲಿ ನೂತನವಾಗಿ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು, ತಾ.೯ರಂದು ಬೆಳಿಗ್ಗೆ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ದೇಗುಲದಲ್ಲಿ ತಿಳಿಸಿದರು.

ನೂತನ ಗರ್ಭಗುಡಿಯನ್ನು ಪಡುಬಿದ್ರಿ ಎರ್ಮಾಳುಗುತ್ತು ಶ್ರೀಮತಿ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳು ಕಲ್ಲಟೆಗುತ್ತು ಮೂಲಕುಟುಂಬಸ್ಥರು ಸೇವಾರೂಪದಲ್ಲಿ ನಿರ್ಮಿಸಿದ್ದಾರೆ.
s
ಕಲಾತ್ಮಕ ಗರ್ಭಗುಡಿ
೨೦೧೩ನೇ ಇಸವಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನಿರ್ದೇಶಿಸಿದಂತೆ ಮೂಲಲಿಂಗದ ಸುತ್ತ ಧ್ವಜ ಆಯದಲ್ಲಿ ಗರ್ಭಗುಡಿಯು ಚತುಃಶಾಲೆಯ ಮಾದರಿಯಂತೆ ನಿರ್ಮಾಣವಾಗಿದ್ದು ಅದರ ಅಂಗಣದಲ್ಲಿ ನೆಲಮಟ್ಟದಲ್ಲೇ ಮೂಲಬಿಂಬವು ಮಳೆ ಸೂರ್ಯ ರಶ್ಮಿಯನ್ನು ಪಡೆಯುವ ರೀತಿಯಲ್ಲಿ ವಾಸ್ತುವನ್ನು ವಿನ್ಯಾಸಗೊಳಿಸಲಾಗಿದೆ. ಗುಡಿಯು ಶಿಲಾಮಯವಾಗಿದ್ದು ಮರ ಹಾಗೂ ತಾಮ್ರದಿಂದ ಮಾಡು ನಿರ್ಮಾಣವಾಗಿದೆ. ಶಿಲಾಮಯ ಗರ್ಭಗುಡಿಯು ಕಲಶಬಂಧ ಅಧಿಷ್ಠಾನವನ್ನು ಹೊಂದಿದ್ದು, ಭಿತ್ತಿಸ್ತಂಭ, ಪಂಜರ, ಕುಂಭಲತೆಗಳನ್ನು ಒಳಗೊಂಡಿದೆ. ಚಾಲುಕ್ಯ ಶೈಲಿಯ ೨ ಕಂಭಗಳ ಮೇಲೆ ಮುಖಮಂಟಪ ಇದೆ. ಮುಖ ಮಂಟಪದ ಮೇಲೆ ದಶಾವತಾರ ಹಾಗೂ ಶ್ರೀ ಕ್ಷೇತ್ರದ ಇತಿಹಾಸದ ಮರದ ಕೆತ್ತನೆಯ ಮೂರ್ತಿಗಳು ಸೇರಿ ಮಾಡಿನ ಮರಗಳಲ್ಲಿ ಹಲವಾರು ಸೂಕ್ಷ್ಮ ಕೆತ್ತನೆಯ ಕೆಲಸಗಳನ್ನು ಮಾಡಲಾಗಿದೆ. ತಾಮ್ರದ ಮಾಡಿನ ಶ್ರೀ ಮುಖದಲ್ಲಿ ಕಿಂಪುರುಷನ ಮರದ ಕೆತ್ತನೆ ರಮಣೀಯವಾಗಿದೆ. ಕೇರಳ ಅಥವಾ ಕರಾವಳಿಯ ಶೈಲಿಯಲ್ಲಿ ನಿರ್ಮಿತ ಈ ಗುಡಿಯನ್ನು ಇಪ್ಪತ್ತು ಮಂದಿ ಶಿಲ್ಪಿಗಳು ಸುಮಾರು ಒಂಭತ್ತು ತಿಂಗಳ ಕಾಲದಲ್ಲಿ ನಿರ್ಮಿಸಿದ್ದಾರೆ ಎಂದವರು ತಿಳಿಸಿದರು.
೧೯೭೭ರ ತನಕ ವರ್ಷಕ್ಕೊಮ್ಮೆ ಮಾತ್ರ ಜಾತ್ರೆಯ ಸಂದರ್ಭ ಇಲ್ಲಿ ದೇವರಿಗೆ ಪೂಜೆ ನಡೆಯುತ್ತಿದ್ದು, ಅಷ್ಟಮಂಗಲದಲ್ಲೂ ಒಂದು ಬಾರಿ ಪೂಜೆಯ ಬಗ್ಗೆ ತಿಳಿಸಲಾಗಿದೆ. ಬ್ರಹ್ಮಕಲಶದ ಬಳಿಕ ತಂತ್ರಿಗಳ ನಿರ್ದೇಶನದಂತೆ ಭ್ರಾಮರೀ ವನದಲ್ಲಿ ಪೂಜೆಯ ಕುರಿತು ನಿರ್ಣಯಿಸಲಾಗುವುದು.
ಈಗಾಗಲೇ ಅರ್ಚಕರ ಸ್ನಾನಕ್ಕಾಗಿ ಹಾಗೂ ದೇವಿಯ ತೀರ್ಥಕ್ಕಾಗಿ ೨ ಕೆರೆಗಳೂ ಇಲ್ಲಿ ನಿರ್ಮಾಣವಾಗಿದ್ದು, ನಾಗನಿಗೆ ಚಿತ್ರಕೂಟ ಮತ್ತು ವ್ಯಾಘ್ರಚಾಮುಂಡಿಯ ಅಧಿಷ್ಠಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಮುಂದೆ ಪರಿಧಿ, ಯಾಜ್ಞಿಕ ವೃಕ್ಷ ಪ್ರತಿಷ್ಠೆ, ಯಾಗಶಾಲೆ, ತುಳಸಿ ಪುಷ್ಪೋದ್ಯಾನ, ನಾಗನಿಗಾಗಿಯೇ ನೀರು ಕುಡಿಯಲು ನಾಗಕೂಪ, ಧ್ಯಾನಕೇಂದ್ರ ಮತ್ತು ಕ್ಷೇತ್ರದ ಮಹಾತ್ಮೆಯನ್ನು ಸಾರುವ ಶಿಲಾಮಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಯೋಜನೆಗಳನ್ನು ಭಕ್ತರ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು. ಈ ಸುಂದರ ಗರ್ಭಗುಡಿಯನ್ನು ಪ್ರಸಿದ್ಧ ವಾಸ್ತುತಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ನಿರ್ದೇಶನದಂತೆ ಉಡುಪಿಯ ಎಲ್ಲೂರಿನ ವಿಷ್ಣುಮೂರ್ತಿ ಭಟ್ ಇವರ ಉಸ್ತುವಾರಿಯಲ್ಲಿ ಶಿಲ್ಪಿಗಳು ನಿರ್ಮಿಸಿದ್ದಾರೆ. ಕುದ್ರುವಿನ ಎರಡೂ ಬದಿಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿರುವುದರಿಂದ ಉತ್ತಮವಾಗಿ ನೀರು ಸಂಗ್ರಹವಾಗಿದ್ದು, ಕುದ್ರುವಿನ ಸೌಂದರ್ಯ ಇನ್ನಷ್ಟು ಹೆಚ್ಚಿದೆ. ಪ್ರವಾಸಿಗಳಿಗೆ ಉತ್ತಮ ವೀಕ್ಷಣೆಯ ಆಧ್ಯಾತ್ಮ ಕೇಂದ್ರವಾಗಿಯೂ ಈ ಕುದ್ರು ಮೂಡಿಬರಲಿದೆ. ರಕ್ಷಣೆ ಹಾಗೂ ಸ್ವಚ್ಛತೆಗೆ ಗಮನ ನೀಡಲಾಗುವುದು ಎಂದು ಅವರು ತಿಳಿಸಿದರು.
ತತ್ಪ್ರಯುಕ್ತ ತಾ.೯ರ ಸೋಮವಾರ ಮಧ್ಯಾಹ್ನದಿಂದ ಕಟೀಲು ಮೇಳದ ಕಲಾವಿದರಿಂದ ಯಕ್ಷಗಾನ ಗಾನಾಮೃತ, ಕದ್ರಿ ಗೋಪಾಲನಾಥ್‌ರಿಂದ ಸ್ಯಾಕ್ಸೋಫೋನ್ ವಾದನವಿದೆ. ಸಭಾ ಕಾರ‍್ಯಕ್ರಮದಲ್ಲಿ ಪೇಜಾವರದ ಈರ್ವರು ಯತಿಗಳು, ಎಡನೀರು ಶ್ರೀಗಳು, ಒಡಿಯೂರು, ಮಾಣಿಲ, ಕೊಂಡೆವೂರು ಸ್ವಾಮೀಜಿಗಳು, ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಚಿವರಾದ ಅಭಯಚಂದ್ರ, ವಿನಯಕುಮಾರ ಸೊರಕೆ, ಯು.ಟಿ.ಖಾದರ್, ಸಾಂಸದ ನಳಿನ್ ಕುಮಾರ್, ಗಣೇಶ್ ಕಾರ್ಣಿಕ್ ಮುಂತಾದವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದಾನಿ ಸತೀಶ್ ಶೆಟ್ಟಿ ಎರ್ಮಾಳು, ಜೆ.ಸಿ.ಕುಮಾರ್, ಬಿ.ಟಿ.ಬಂಗೇರ, ರಾಘವೇಂದ್ರ ಆಚಾರ‍್ಯ, ಸುಷ್ಮಾ ಎಂ. ಮಲ್ಲಿ, ಚಂದ್ರಹಾಸ ರೈ, ವಾಮಯ್ಯ ಶೆಟ್ಟಿ, ಪದ್ಮನಾಭ ಪಯ್ಯಡೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.



ಅತ್ಯಂತ ಕಲಾತ್ಮಕ ಸುವರ್ಣ ನಡೆದೇಗುಲ
ಸರಕಾರದ ಉಸ್ತುವಾರಿಯಲ್ಲಿ ನಿರ್ಮಿತ ಮೊದಲ ಚಿನ್ನದ ರಥ
ಕೇರಳ, ಮಹಾರಾಷ್ಟ್ರಗಳಲ್ಲಿ ಕರ್ನಾಟಕದ ನೂರಾರು ಕಡೆಗಳಲ್ಲಿ ಚಿನ್ನದ ನಾನಾ ಪ್ರಾಕಾರಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಇಲ್ಲಿಗಿಂತ ಹೆಚ್ಚಿನ ಚಿನ್ನವನ್ನು ಬಳಸಿ ವಿಗ್ರಹ, ಪಲ್ಲಕಿ ನಿರ್ಮಿಸಿದ್ದೇವೆ. ಆದರೆ ಕಟೀಲಿನ ಚಿನ್ನದ ರಥ ನಾವು ನಿರ್ಮಿಸಿದ ಎಲ್ಲವುಗಳಿಗಿಂತ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂದಿದೆ ಎಂದು ಆತ್ಮತೃಪ್ತಿಯಿಂದ ಹೇಳಿದವರು ರಥ ನಿರ್ಮಾತೃ ಗುತ್ತಿಗೆ ವಹಿಸಿಕೊಂಡ ಸ್ವರ್ಣ ಜ್ಯುವೆಲ್ಲರ‍್ಸ್ ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್.
ಕಟೀಲು ಶ್ರೀ ದುರ್ಗಾಮೇಶ್ವರೀ ದೇವಸ್ಥಾನದ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣವಾದ ರಾಜ್ಯದ ಅತಿ ಎತ್ತರದವಾದ ಚಿನ್ನದ ರಥವನ್ನು ದಿನಾಂಕ ೮ರ ರಾತ್ರಿ ಗಂಟೆ ೮.೩೦ಕ್ಕೆ ಶ್ರೀ ದೇವಿಗೆ ಸಮರ್ಪಿಸಲಾಗುವುದು. ಒಟ್ಟು ೧೪ ಅಡಿ ೧ ಇಂಚು ಎತ್ತರವುಳ್ಳ ಈ ರಥಕ್ಕೆ ೧೯೦ಕಿಲೋ ಬೆಳ್ಳಿ ಹಾಗೂ ೧೧ ಕಿಲೋ ಚಿನ್ನವನ್ನು ಅಳವಡಿಸಲಾಗಿದೆ. ಎಂಟು ಮುಕ್ಕಾಲು ಕೆಜಿ ಚಿನ್ನವನ್ನು ಹಾಗೂ ಒಂದು ಕೋಟಿ ೬೪ಲಕ್ಷದ ೫೨ಸಾವಿರ ರೂ.ಗಳಷ್ಟು ಮೊತ್ತವನ್ನು ಭಕ್ತರೇ ನೀಡಿದ್ದಾರೆ. ಮರದ ರಥವನ್ನು ಶಿಲ್ಪಿಗಳಾದ ಉಡುಪಿಯ ದಿ.ಕೃಷ್ಣಮೂರ್ತಿ ಆಚಾರ್ಯ ಅವರ ಮಗ ಸುದರ್ಶನ ಆಚಾರ್ಯರು, ಸ್ವರ್ಣ ರಥದ ರಚನೆಯನ್ನು ಸ್ವರ್ಣ ಜುವೆಲ್ಲರ‍್ಸ್ ಉಡುಪಿ ಸಂಸ್ಥೆ ತನ್ನ ತಯಾರಿಕ ಘಟಕವಾದ ಸ್ವರ್ಣೋದ್ಯಮದಲ್ಲಿ ತಯಾರಿಸಿದ್ದು ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್‌ರವರು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ವಿವರಿಸಿದರು.
ಸರಕಾರದ ಉಸ್ತುವಾರಿಯಲ್ಲಿ ಸಿದ್ಧವಾದ ಮೊದಲ ಚಿನ್ನದ ರಥ ಇದಾಗಿದೆ. ಸರಕಾರದ ನಿರ್ದೇಶನದಂತೆಯೇ ಎನ್‌ಐಟಿಕೆಯವರಲ್ಲಿ ಅಭಿಪ್ರಾಯ ಕೇಳಲಾಗಿ ಎಲೆಕ್ಟ್ರೋಪ್ಲೇಟ್ , ಎಲೆಕ್ಟ್ರೋ ಪ್ರೇಮಿಂಗ್ಸ್ ಮತ್ತು ಲ್ಯಾಮಿನೇಶನ್ ವಿಧಾನದಲ್ಲಿ ಲ್ಯಾಮಿನೇಶನ್ ಮೂಲಕವೇ ತಯಾರಿಸುವುದೆಂದು ಅಭಿಪ್ರಾಯ ಬಂದಂತೆ ಟೆಂಡರ್ ಕರೆಯಲಾಗಿದ್ದು ಉಡುಪಿಯ ಸ್ವಣೋದ್ಯಮದವರು ಯಶಸ್ವಿ ಬಿಡ್ಡುದಾರರಾಗೊ ಟೆಂಡರ್‌ನ್ನು ಪಡೆದಿರುತ್ತಾರೆ. ಮಂಗಳೂರಿನ ಎನ್‌ಐಟಿಕೆಯ ಅನೇಕ ವಿಭಾಗದ ತಜ್ಞರನ್ನೊಳಗೊಂಡ ತಂಡದ ಮೂಲಕ ಈ ರಥದ ಕಾಮಗಾರಿಯು ನಡೆದಿದ್ದು ಪ್ರತಿಹಂತದಲ್ಲೂ ಗುಣಮಟ್ಟ ಹಾಗೂ ತೂಕದ ದೃಢೀಕರಣದೊಂದಿಗೆ ರಥವು ನಿರ್ಮಾಣವಾಗಿರುತ್ತದೆ, ಒಟ್ಟು ಎರಡು ಹಂತಗಳಲ್ಲಿ ಮತ್ತೇ ಪುನಃ ಆಯ್ಕೆ ಮಾಡಲ್ಪಟ್ಟ ಚಿನ್ನದ ಲ್ಯಾಮಿನೇಶನ್ ಮಾಡಲ್ಪಟ್ಟ ೨ ಭಾಗಗಳನ್ನು ಪುನಃ ಕರಗಿಸಿ ಗುಣಮಟ್ಟ ಹಾಗೂ ತೂಕದ ದೃಢೀಕರಣವನ್ನು ಮಾಡಿಸಿ ನಂತರ ಮರದ ರಥಕ್ಕೆ ಈ ತಗಡುಗಳನ್ನು ಜೋಡಿಸಿ ರಥ ನಿರ್ಮಾಣ ಮುಗಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು ೬೫೦ ಬೆಳ್ಳಿ ಭಾಗಗಳಲ್ಲಿ ಚಿನ್ನದ ಉಬ್ಬು ಶಿಲ್ಪಗಳನ್ನು ಮಾಡಿ ಅದಕ್ಕೆ ಚಿನ್ನದ ಲ್ಯಾಮಿನೇಶನ್ ಮಾಡಲಾಗಿದೆ. ಅಷ್ಟ ದಿಕ್ಪಾಲಕರು, ಎರಡು ಬಗೆಯ ಆರಾಧನಾ ವಿಧಾನವುಳ್ಳ ನವದುರ್ಗೆಯರ ಒಟ್ಟು ೧೮ ಮೂರ್ತಿಗಳು, ಅಷ್ಟ ಲಕ್ಷ್ಮಿಗಳ ಮೂರ್ತಿಯನ್ನು ಈ ರಥಕ್ಕೆ ಅಳವಡಿಸಲಾಗಿದ್ದು ಹಲವಾರು ಅಪೂರ್ವ ಶಿಲ್ಪಗಳನ್ನು ಈ ರಥಕ್ಕೆ ಅಳವಡಿಸಿ ನಿರ್ಮಿಸಿರುವುದು ರಥದ ಸೌಂದರ್ಯವನ್ನು ಹೆಚ್ಚಿಸಿದೆ. ದೇಗುಲದ ಒಳಗೆ ಇರುವ ಭದ್ರತಾ ಕೊಠಡಿಯಲ್ಲಿ ರಥವನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ವಿವರಿಸಿದರು.
ತಾ.೮ರಂದು ಚಿನ್ನದ ರಥದ ಸಮರ್ಪಣೆಯನ್ನು ಧಾರ್ಮಿಕ ದತ್ತಿ ಸಚಿವರಾದ ಸನ್ಮಾನ್ಯ ಟಿ.ಬಿ.ಜಯಚಂದ್ರ ದೇಗುಲಕ್ಕೆ ಮಾಡಲಿದ್ದು, ಕೃಷ್ಣಾಪುರ, ಪಲಿಮಾರು ಮಠಾಧೀಶರು, ಸಚಿವರಾದ ಸದಾನಂದ ಗೌಡ, ರಮಾನಾಥ ರೈ, ಅಭಯಚಂದ್ರ, ಆರ್. ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಾಂಸದ ನಳಿನ್ ಕುಮಾರ್, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ಎಂ.ಕೃಷ್ಣಪ್ಪ, ಐವನ್ ಡಿಸೋ, ದಯಾನಂದ ರೆಡ್ಡಿ, ಡಿ.ಯು.ಮಲ್ಲಿಕಾರ್ಜುನ, ಕರ್ನಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಕಟೀಲು ಸುರೇಶ್ ರಾವ್, ಮಾಲಾಡಿ ಅಜಿತ್ ಕುಮಾರ ರೈ, ಸುಧೀರಪ್ರಸಾದ ಶೆಟ್ಟಿ ಮುಂತಾದವರು   ಭಾಗವಹಿಸಲಿದ್ದಾರೆ. ಅಂದು ಲಿಂಗಪ್ಪ ಸೇರಿಗಾರಿಂದ ನಾಗಸ್ವರ ವಾದನ, ವಿದ್ಯಾಭೂಷಣರಿಂದ ಭಕ್ತಿ ಸಂಗೀತ, ಸುಬ್ರಹ್ಮಣ್ಯ ಭಟ್ ಗುಂಡಿಬೈಲುರಿಂದ ಅಷ್ಟಾವಧಾನ, ವಿದ್ಯಾಶ್ರೀಧರ ಕೃಷ್ಣಬಳಗದಿಂದ ನೃತ್ಯಾರ್ಚನೆ ನಡೆಯಲಿದೆ.